ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ವತಿಯಿಂದ ಸಂಪೂರ್ಣ ಸುರಕ್ಷಾ ವಿಮೆ ಯೋಜನೆಯಡಿ ೫೬ ಮಂದಿ ಫಲಾನುಭವಿಗಳಿಗೆ ೮,೫೩,೬೦೦ ರೂ.ಗಳ ಆರ್ಥಿಕ ನೆರವಿನ ಚೆಕ್ ವಿತರಣಾ ಕಾರ್ಯಕ್ರಮ ಯೋಜನೆಯ ಬಂಟ್ವಾಳದಲ್ಲಿರುವ ಉನ್ನತಿ ಸೌಧ ಸಭಾಂಗಣದಲ್ಲಿ ಗುರುವಾರ ನಡೆಯಿತು.


ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಸುದರ್ಶನ್ ಜೈನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳ್ತಂಗಡಿಯಲ್ಲಿ ಆರಂಭವಾದ ಯೋಜನೆಯು ಪ್ರಸ್ತುತ ರಾಜ್ಯದಲ್ಲಡೆ ವಿಸ್ತರಣೆಗೊಂಡಿದ್ದು, ಶಿಕ್ಷಣ, ಆಕಸ್ಮಿಕ ಕಷ್ಟಗಳಿಗೆ ನೆರವು ನೀಡುತ್ತಾ ಬಂದಿದೆ.


ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತಮ್ಮ ಪಟ್ಟಾಭಿಷೇಕದ ಬಳಿಕ ಜನಮಾನಸಕ್ಕೆ ಬೇಕಾದ ನೂರಾರು ಸೇವಾ ಕಾರ್ಯಗಳ ಮೂಲಕ ಸಮಾಜಕ್ಕೆ ಬೆಳಕಾಗಿದ್ದಾರೆ ಎಂದರು.ಜನಜಾಗೃತಿ ವೇದಿಕೆಯ ಸದಸ್ಯ ಶ್ರೀನಿವಾಸ ಶೆಣೈ ಕಾರ್ಯಕ್ರಮ ಉದ್ಘಾಟಿಸಿದರು.

ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ, ಯೋಜನೆಯು ವಿಮಾ ಸೌಲಭ್ಯಗಳ ಮೂಲಕ ಪಡೆದ ಸಾಲ, ಆರೋಗ್ಯಕ್ಕೆ ಭದ್ರತೆ ನೀಡುವ ಕಾರ್ಯ ಮಾಡುತ್ತಿದೆ. ಕುತ್ತಾರಿನಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬದ ಓರ್ವ ಮಹಿಳೆ ಸಂಘದ ಸದಸ್ಯೆಯಾಗಿದ್ದರು.

ಹೀಗಾಗಿ ಅವರ ೩ ಲಕ್ಷ ರೂ.ಸಾಲದಲ್ಲಿ ಪಾವತಿಗೆ ಬಾಕಿ ಇದ್ದ ೨.೩೫ ಲಕ್ಷ ರೂ.ಗಳ ಸಾಲ ಮನ್ನಾವಾಗಿದೆ. ಜತೆಗೆ ೪ ಲಕ್ಷ ರೂ. ವಿಮಾ ಸೌಲಭ್ಯದ ಜತೆಗೆ ಉಳಿತಾಯದ ಮೊತ್ತ ಸೇರಿ ಸುಮಾರು ೬.೫೦ ಲಕ್ಷ ರೂ.ಗಳ ನೆರವು ಲಭಿಸಿದೆ ಎಂದರು.


ಬಂಟ್ವಾಳ ಯೋಜನಾಧಿಕಾರಿ ಬಾಲಕೃಷ್ಣ ಸ್ವಾಗತಿಸಿದರು. ವಿಮಾ ಸಂಯೋಜಕಿ ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು. 

By Suddi9

Leave a Reply

Your email address will not be published. Required fields are marked *