ಸಮಾಜದಲ್ಲಿ ಶಾಂತಿ ಸಾಮರಸ್ಯಕ್ಕೆ ಮಾಧ್ಯಮದ ಮೂಲಕ ಹೆಚ್ಚಿನ ಕೊಡುಗೆ ದೊರೆಯುವಂತಾಗಲಿ -ಯು.ಟಿ.ಖಾದರ್
ಮಂಗಳೂರು:ಸಮಾಜದಲ್ಲಿ ಶಾಂತಿ ಸೌಹಾರ್ದ ,ಸಾಮರಸ್ಯಕ್ಕಾಗಿ ಮಾಧ್ಯಮದ ಮೂಲಕ ಹೆಚ್ಚು ಕೊಡುಗೆ ದೊರೆಯುವಂತಾಗಲಿ ಎಂದು ವಿಧಾನ ಸಭಾಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ನಗರದ ಪತ್ರಿಕಾಭವನದಲ್ಲಿ ಜರುಗಿದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಭವಿಷ್ಯದ ದೃಷ್ಟಿಯಿಂದ ಮಾಧ್ಯಮಗಳು ಜನಪ್ರತಿನಿಧಿಗಳು ಸಮಾಜದ ಸಾಮರಸ್ಯ ಕೊಂಡಿಯಾಗಬೇಕಾಬೇಕಾಗಿದೆ. ಪತ್ರಿಕೆಗಳು ಸ್ವಾತಂತ್ರ್ಯ ಪೂರ್ವದಿಂದಲೇ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತ ಬಂದಿವೆ. ಅಂಬೇಡ್ಕರ್, ಗಾಂಧೀಜಿ ಕೂಡ ಜನರನ್ನು ತಲುಪಲು ಪತ್ರಿಕೆಯನ್ನು ಆರಂಭಿಸಿದ್ದರು.

ಇಂದು ಬದಲಾದ ಕಾಲಘಟ್ಟದಲ್ಲಿ ಪತ್ರಿಕೆಗಳ ಸ್ವರೂಪ ಬದಲಾಗಿದೆ. ವಿದ್ಯಾರ್ಥಿಗಳು ದೈನಂದಿನ ಆಗುಹೋಗು ತಿಳಿಯಲು ಜ್ಞಾನಾರ್ಜನೆಗೆ ಪತ್ರಿಕೆಗಳನ್ನು ಓದಬೇಕು. ನನಗೆ ಬಾಲ್ಯದಲ್ಲಿ ಪತ್ರಿಕೆ ಓದುವುದರ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೆ. ಪತ್ರಿಕೆಯನ್ನು ಕಾದು ಕುಳಿತು ಓದುವಷ್ಟು ಆಸಕ್ತಿ ನನ್ನಲ್ಲಿತ್ತು. ಭಾಷೆಯ ಬಗ್ಗೆ ಹಿಡಿತ ಹೊಂದಲು ಪತ್ರಿಕೆ ಓದುವುದು ಸಹಕಾರಿ “ಎಂದರು.
*ಸಮಾಜದ ಸ್ವಾಸ್ಥ್ಯ ಕಾಪಾಡುವ ಮಾಧ್ಯಮ ರಂಗ:-
ಪತ್ರಿಕಾ ದಿನದ ಅಂಗವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತಾಡಿದ ನಿವೃತ್ತ ಉಪನ್ಯಾಸಕಿ ಭುವನೇಶ್ವರಿ ಹೆಗಡೆ ಅವರು ಮಾತನಾಡುತ್ತಾ, ಮಾಧ್ಯಮ ಗಳು ಸಮಾಜದ ಸ್ವಾಸ್ಥ್ಯ ಕಾಪಾಡುವವರು. ಪತ್ರಕರ್ತರ ಸಾಮಾಜಿಕ ಜವಾಬ್ದಾರಿ ಮಹತ್ವದ ಹೊಣೆಗಾರಿಕೆ. ಯಾವುದೇ ವಿಷಯವನ್ನು ಉತ್ಪ್ರೇಕ್ಷೆ ಮಾಡಿ ಬರೆಯಬಾರದು. ಪತ್ರಕರ್ತರು ಒತ್ತಡಕ್ಕೆ ಒಳಗಾಗದೆ ಸಂಯಮವನ್ನು ಕಾಯ್ದುಕೊಳ್ಳಬೇಕು. ಪತ್ರಕರ್ತರು ಸ್ವಾಸ್ಥ್ಯ ಸಮಾಜದ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಪತ್ರಕರ್ತರು ತಮ್ಮ ಬದುಕಿನಲ್ಲಿ ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳ ಬೇಕು. ಇದರಿಂದ ದೈನಂದಿನ ಬದುಕಿನ ಒತ್ತಡ ಕಡಿಮೆಯಾಗಿ ಅರೋಗ್ಯ ಕಾಪಾಡಿಕೊಳ್ಳಬಹುದು ” ಎಂದರು.
ಸಮಾರಂಭದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮೂಡಾ ಅಧ್ಯಕ್ಷೆ ಸದಾಶಿವ ಉಳ್ಳಾಲ್,ವಾರ್ತಾ ಸಾರ್ವಜನಿಕ ಇಲಾಖೆ ಸಹಾಯಕ ಖಾದರ್ ಶಾ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ನಂದಗೋಪಾಲ್, ಸುರೇಶ್ ಪುದುವೆಟ್ಟು, ಜಗನ್ನಾಥ ಶೆಟ್ಟಿ ಬಾಳ,ಇಬ್ರಾಹಿಂ ಅಡ್ಕಸ್ಥಳ,ಭಾಸ್ಕರ ರೈ ಕಟ್ಟ, ಸಿದ್ಧಿಕ್ ನೀರಾಜೆ ,ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಪತ್ರಿಕಾ ಭವನದ ಅಧ್ಯಕ್ಷ ರಾಮಕೃಷ್ಣ ಆರ್ ಉಪಸ್ಥಿತರಿದ್ದರು.
ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್. ಬಿ.ಎನ್ ಸನ್ಮಾನ ಪತ್ರ ವಾಚಿಸಿದರು.ಸತೀಶ್ ಇರಾ ಪ್ರಾರ್ಥಿಸಿದರು.ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.