ಮೊಡಂಕಾಪು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾಧಿಕಾರಿ ಹಠಾತ್ ಭೇಟಿ
ಬಂಟ್ವಾಳ: ಮಳೆಗಾಲದಲ್ಲಿ ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಿಸುವ ಮೂಲಕ ತಾವೂ ಮಕ್ಕಳ ಸ್ನೇಹಿ ಡ.ಸಿ.ಯಾಗಿ ಗುರುತಿಸಿರುವ ಮುಲ್ಲೈ ಮುಹಿಲನ್ ಅವರು ಶುಕ್ರವಾರ ಸಂಜೆ ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಹಠಾತ್ ಭೇಟಿ ನೀಡಿದರು.

ಇಲ್ಲಿರುವ ಮಕ್ಕಳ ಜೊತೆ ಖುದ್ದಾಗಿ ಒಂದಷ್ಟು ಕಾಲ ಬೆರೆತು ಕುಶಲೋಪಚರಿ ನಡೆಸಿ ಗಮನ ಸೆಳೆದರು.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರಿಗೆ ಮಕ್ಕಳೆಂದರೆ ಅಚ್ಚುಮೆಚ್ಚು. ಜಿಲ್ಲೆಗೆ ಬಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸುವ ಮೂಲಕ ಮಕ್ಕಳ ಅಚ್ಚುಮೆಚ್ಚಿನ ಡಿ.ಸಿ ಎಂದೇ ಗುರುತಿಸಿಕೊಂಡಿದ್ದಾರೆ.

ವಿಪರೀತ ಮಳೆಯಿದ್ದಾಗ ಮಂಗಳೂರು ಸಹಿತಫ ಜಿಲ್ಲೆಯ ವಿವಿದೆಡೆಯ ಮಕ್ಕಳು ಖುದ್ದಾಗಿ ಜಿಲ್ಲಾಧಿಕಾರಿಯವರಿಗೆ ಕರೆ ಮಾಡಿ ರಜೆಯ ಬಗ್ಗೆ ವಿಚಾರಿಸುತ್ತಿರುವುದನ್ನು ಸ್ವತ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಪತ್ರಕರ್ತರೊಂದಿಗೆ ಹೇಳಿಕೊಂಡಿದ್ದರು.
ಶುಕ್ರವಾರ ಬಂಟ್ವಾಳದ ಮಳೆ ಹಾನಿ ಬಾಧಿತ ಪ್ರದೇಶಗಳಾದ ಪಾಣೆಮಂಗಳೂರು, ಕಲ್ಲಡ್ಕ, ಮಾಣಿ, ಪೆರ್ನೆ ಮತ್ತಿತರ ಕಡೆ ತೆರಳಿ ಮಳೆಹಾನಿ ಬಗ್ಗೆ ವೀಕ್ಷಿಸಿದ ಬಳಿಕ ಸಂಜೆ ವೇಳೆಗೆ ಬಿ ಸಿ ರೋಡು ಸಮೀಪದ ಮೊಡಂಕಾಪು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಅವರುಇಲ್ಲಿನ ಮಕ್ಕಳೊಂದಿಗೆ ಒಂದಷ್ಟು ಸಮಯ ಮಕ್ಕಳಂತೆ ಬೆರೆತು ಎಲ್ಲರಿಗೂ ಕೈಕುಲುಕಿ ಸಂಭ್ರಮಿಸಿದರು.
ಇದೇ ವೇಳೆ ಮಕ್ಕಳಿಂದ ಅಂಬೇಡ್ಕರ್ ಬಗ್ಗೆ ಹಾಡು ಹಾಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಗಮನ ಸೆಳೆದರು.ವಸತಿ ನಿಲಯದ ಶುಚಿತ್ವ,ಆಹಾರದ ಗುಣಮಟ್ಟ ಸಹಿತ ಕೆಲ ಮಾಹಿತಿಯನ್ನು ಪಡೆದರು.
ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು ಜೊತೆಗಿದ್ದರು.