ವಿವಿಧ ಬೇಡಿಕೆಗಳ ಈಡೇರಿಸುವಂತೆ ಮನವಿ
ಬಂಟ್ವಾಳ: ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಮಂಡಳಿಯ ಹೊಸ ತಂತ್ರಾಂಶದ ದೋಷ ಸರಿಪಡಿಸಬೇಕು,ಶೈಕ್ಷಣಿಕ ಸಹಾಯಧನ ಹಾಗೂ ಕಟ್ಟಡ ಕಾರ್ಮಿಕರ ವಿವಿಧ ಸೌಲಭ್ಯಗಳು ಹಾಗೂ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಪ್ರಗತಿಪರ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಸಂಘ(ರಿ.)ಎ.ಐ.ಸಿ.ಸಿ.ಟಿ.ಯು ವತಿಯಿಂದ ಕಾರ್ಮಿಕ ನಿರೀಕ್ಷಕರ ಮೂಲಕ ಕಲ್ಯಾಣ ಮಂಡಳಿಯ ಕಾರ್ಯನಿರ್ವಹಾಣಾದಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ವಿವಿಧ ಸೌಲಭ್ಯಗಳಿಗೆ ಅನ್ಲೈನ್ ನಲ್ಲಿ ಅರ್ಜಿಸಲ್ಲಿಸಲು ಹೊಸತಾದ ತಂತ್ರಾಂಶ ದಲ್ಲಿ ಹಲವಾರು ದೋಷಗಳಿದ್ದು ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ನವೀಕರಣ ಮಾಡಲಾಗುತ್ತಿಲ್ಲ ಇದರಿಂದಾಗಿ ಕಾರ್ಮಿಕರ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ತಂತ್ರಾಂಶದಲ್ಲಿರುವ ತಾಂತ್ರಿಕ ದೋಷವನ್ನು ಸರಿಪಡಿಸಬೇಕು.
ಕಟ್ಟಡ ಕಾರ್ಮಿಕರ ಮೂಲ ಗುರುತಿನಚೀಟಿಯನ್ನು ಪರಿಗಣಿಸಿ ಪಿಂಚಣಿ ನೀಡಬೇಕು.ಶೈಕ್ಷಣಿಕ ಸಹಾಯಧನಕ್ಕೆ ಈ ಮೊದಲು ಹಾಕಲಾದ ಅರ್ಜಿಯನ್ನು ವಿಲೇವಾರಿ ಮಾಡಿ ಈ ಶೈಕ್ಷಣಿಕ ವರ್ಷದ ಅರ್ಜಿಯನ್ನು ಪ್ರಾರಂಭಿಸಬೇಕು ಹಾಗೂ ಹಳೇ ಮಾದರಿಯಲ್ಲಿ ಶೈಕ್ಷಣಿಕ ಧನಸಹಾಯವನ್ನು ನೀಡಬೇಕು, ಎಲ್ಲಾ ಕಾರ್ಮಿಕ ಇಲಾಖೆಗಳಲ್ಲಿ ಖಾಯಂ ಕಾರ್ಮಿಕ ನಿರೀಕ್ಷಕರು ಹಾಗೂ ಸಿಬ್ಬಂದಿ ಯನ್ನು ನೇಮಿಸಬೇಕು, ಕಟ್ಟಡ ಕಾರ್ಮಿಕರು ಸಲ್ಲಿಸಿದ ವಿವಿಧ ಸೌಲಭ್ಯಗಳ ಅರ್ಜಿಯನ್ನು ಪರಿಶೀಲಿಸಿ ಶೀಘ್ರ ವಿಲೇವಾರಿ ಮಾಡಬೇಕು, ಮಂಡಳಿಯಿಂದ ಕಾರ್ಮಿಕರಿಗೆ ಕಿಟ್ ಸಹಿತ ಎಲ್ಲಾ ಸೌಲಭ್ಯಗಳನ್ನು ಕಾರ್ಮಿಕರಿಗೆ ನೇರವಾಗಿ ಒದಗಿಸಬೇಕು, ಎಲ್ಲಾ ಜಿಲ್ಲಾ ಕಾರ್ಮಿಕ ಇಲಾಖಾ ಕೇಂದ್ರಗಳಲ್ಲಿ ಕಟ್ಟಡ ಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಪ್ರತೀ ತಿಂಗಳು ಅದಾಲತ್ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಎ.ಐ.ಸಿ.ಸಿ.ಟಿ.ಯು ಜಿಲ್ಲಾಧ್ಯಕ್ಷರಾದ ರಾಮಣ್ಣ ವಿಟ್ಲ , ಜಿಲ್ಲಾ ಕಾರ್ಯದರ್ಶಿ ಮೋಹನ್.ಕೆ.ಇ, ಮುಖಂಡರಾದ ಅಚ್ಯುತ ಕಟ್ಟೆ, ರಾಜೀವ ಅಳಿಕೆ ಮುಂತಾದವರಿದ್ದರು.