ಪುತ್ತೂರು: ಸಂಪ್ರದಾಯಸ್ಥ ಮನೆತನದ ಗೃಹಿಣಿಯ ಸ್ನೇಹ ಬೆಳೆಸಿದ ಯುವಕ ಆಕೆಯನ್ನು ಕಳೆದ ಸೆಪ್ಟಂಬರ್ 13ರಂದು ಅಪಹರಿಸಿದ್ದು, ಗೃಹಿಣಿ ಇನ್ನೂ ನಾಪತ್ತೆಯಾಗಿರುವಂತೆಯೇ ಸೋಮವಾರ ಆತ ನ್ಯಾಯಾಲಯಕ್ಕೆ ಹಾಜರಾಗಲು ಬರುತ್ತಿರುವ ಮಾಹಿತಿ ಪಡೆದ ಯುವತಿ ಕಡೆಯವರು ಆತನನ್ನು ಕೋರ್ಟ್ ಆವರಣದಿಂದಲೇ ಅಪಹರಿಸಿದ ಘಟನೆ ನಡೆದಿದೆ. ಡೆನ್ಸನ್ ಅಪಹರಣಕ್ಕೊಳಗಾದ ಯುವಕ.
ಕಲ್ಲಾರೆ ನಿವಾಸಿ ಕೀರ್ತಿಕಾ ಭಟ್(24) ಇಂಜಿನಿಯರ್ ಪದವೀಧರೆಯಾಗಿದ್ದು, ಕೆಲವರ್ಷಗಳ ಹಿಂದೆ ಫೊಟೋಗ್ರಾಫರ್ ಆಗಿರುವ ಗಿರಿಧರ ಭಟ್ ಎಂಬವರ ಜೊತೆ ಈಕೆಯ ಮದುವೆ ಮಾಡಲಾಗಿತ್ತು. ಕೀರ್ತಿಕಾ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಡೆನ್ಸನ್ ಎಂಬಾತನ ಪರಿಚಯವಾಗಿತ್ತು. ಇಬ್ಬರ ಮಧ್ಯೆ ಸರಸ ಸಲ್ಲಾಪ ನಡೆಯುತ್ತಿರುವುದನ್ನು ತಿಳಿದ ಪತಿ ಗಿರಿಧರ ಭಟ್ ಅವರು ಆಕೆಯ ಕೆಲಸವನ್ನು ಬಿಡಿಸಿ ಮನೆಯಲ್ಲಿ ಇರಿಸಿದ್ದರು.
ಕಳೆದ ಸೆಪ್ಟಂಬರ್ 13ರಂದು ಊರಿಗೆ ಬಂದಿದ್ದ ಡೆನ್ಸನ್ ಆಕೆಯನ್ನು ಅಪಹರಣ ಮಾಡಿದ್ದಾಗಿ ಪುತ್ತೂರು ಠಾಣೆಗೆ ದೂರು ನೀಡಲಾಗಿತ್ತು. ಆರೋಪಿ ಡೆನ್ಸನ್ ವಿರುದ್ಧ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದು, ಸೋಮವಾರ ಆತ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ. ಈ ಬಗ್ಗೆ ಮಾಹಿತಿ ಪಡೆದ ಕೀರ್ತಿಕಾ ಮನೆಮಂದಿ ಸುಮೋ ಕಾರಿನಲ್ಲಿ ಡೆನ್ಸನ್ ನನ್ನು ಅಪಹರಣ ಮಾಡಿದ್ದಾರೆ ಎಂದು ಡೆನ್ಸನ್ ತಂದೆ ಜೋಸೆಫ್ ದೂರಿದ್ದಾರೆ. ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



