ವೈದ್ಯಕೀಯ, ಕ್ಯಾನ್ಸರ್ ತಪಾಸಣೆ, ನೇತ್ರ ಹಾಗೂ ದಂತ ಚಿಕಿತ್ಸಾ ಶಿಬಿರ
ಬಂಟ್ವಾಳ: ಬ್ಯಾಂಕಿನ ವ್ಯವಹಾರದ ಜತೆಗೆ ಗ್ರಾಹಕರ ಆರೋಗ್ಯದ ಕಡೆ ಗಮನ ಹರಿಸಿದ ಬ್ಯಾಂಕಿನ ಕಾರ್ಯ ಅಭಿನಂದನದಾಯಕವಾಗಿದೆ ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರ ಅಭಿಪ್ರಾಯ ಪಟ್ಟರು.

ಶನಿವಾರ ಕಲ್ಲಡ್ಕ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ(ನಿ) ಕಲ್ಲಡ್ಕ ಶಾಖೆ ಹತ್ತು ವರ್ಷ ಪೂರ್ಣಗೊಳಿಸಿದ ಪ್ರಯುಕ್ತ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕೆ.ಎಂ. ಸಿ ಆಸ್ಪತ್ರೆ ಅತ್ತಾವರ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್, ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ) ಕಲ್ಲಡ್ಕ, ಗುರೂಜಿ ಸ್ವ- ಸಹಾಯ ಸಂಘ ಕಲ್ಲಡ್ಕ, ಸುರಕ್ಷ ಸಂಗಮ ಪೂರ್ಲಿಪಾಡಿ, ಜಾನ್ಸಿರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಳಿ ಕಲ್ಲಡ್ಕ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ವೈದ್ಯಕೀಯ, ಕ್ಯಾನ್ಸರ್ ತಪಾಸಣೆ, ನೇತ್ರ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ನಿರ್ದೇಶಕ ಸಂಜೀವ ಪೂಜಾರಿ ಗುರುಕೃಪಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಸಂಘದ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು .
ಶ್ರೀ ಗುರೂಜಿ ಸ್ವ ಸಹಾಯ ಸಂಘದ ಅಧ್ಯಕ್ಷ ಪೂವಪ್ಪ ಟೈಲರ್, ಪೂರ್ಲಿಪಾಡಿ ಸುರಕ್ಷಾ ಸಂಗಮದ ಗೌರವಾಧ್ಯಕ್ಷ ವೆಂಕಟರಾಯ ಪ್ರಭು. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಳಿಯ ಅಧ್ಯಕ್ಷೆ ಮೀನಾಕ್ಷಿ ಆರ್ ಪೂಜಾರಿ, ಕೆಎಂಸಿ ಆಸ್ಪತ್ರೆ ಕ್ಯಾನ್ಸರ್ ಚಿಕಿತ್ಸೆ ತಜ್ಞ ಡಾಕ್ಟರ್ ಶೌರ್ಯ ಬ್ಯಾನರ್ಜಿ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ದಂತ ವೈದ್ಯೆ ಡಾ. ಅಪರ್ಣ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ಜೊತೆಗೆ ಸಹಕರಿಸಿದ ಆಸ್ಪತ್ರೆ, ಹಾಗೂ ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು.
ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಯತಿನ್ ಕುಮಾರ್ ಸ್ವಾಗತಿಸಿ, ಸಂಘದ ಕಲ್ಲಡ್ಕ ಶಾಖೆ ವ್ಯವಸ್ಥಾಪಕಿ ಬಬಿತಾ ವಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಶ್ವಥ್ ಕಾರ್ಯಕ್ರಮ ನಿರೂಪಿಸಿದರು.