ಮೂಡುಬಿದರೆ: ನೆಲ್ಲಿಕಾರು ಜಲ್ಲಿ ಕ್ರಷರ್ ಒಂದಕ್ಕೆ ಹೋಗುವ ದಾರಿಗೆ ಸಂಬಂಧಿಸಿದಂತೆ ಗುರುವಾರ ಸ್ಥಳ ಪರಿಶೀಲನೆಗೆ ತೆರಳಿದ ಅಧಿಕಾರಿಗಳ ಎದುರಲ್ಲೇ ಕ್ರಷರ್ ಕ್ರಷರ್ ಸಂಬಂಧಿಸಿದವರು ಪರಸ್ಪರ ಹಲ್ಲೆ ನಡೆಸಿದ ಬಗ್ಗೆ ಮೂಡುಬಿದರೆ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.
ನೆಲ್ಲಿಕಾರಿನ ರತ್ನವರ್ಮ ಜೈನ್ ನೀಡಿದ ದೂರಿನಂತೆ ತಾನು ನೆಲ್ಲಿಕಾರಿನಲ್ಲಿ ಜಲ್ಲಿಕ್ರಷರ್ ಪ್ರಾರಂಭಿಸಲು ಎರಡು ಎಕರೆ ಜಾಗ ಖರೀದಿಸಿದ್ದು ಈ ಜಾಗದ ಸಮೀಪದಲ್ಲೇ ಇರುವ ಮತ್ತೊಂದು ಕ್ರಷರ್ನವರು ತಮ್ಮ ಜಾಗಕ್ಕೆ ಹೋಗುವ ರಸ್ತೆಯನ್ನು ಬಂದ್ ಮಾಡಿದ್ದು ಈ ಕುರಿತು ತಹಸೀಲ್ದಾರ್, ಗಣಿ ಇಲಾಖೆಗೆ ದೂರು ನೀಡಿದ್ದು ಗುರುವಾರ ಅಧಿಕಾರಿಗಳು ಸ್ಥಳ ತನಿಖೆಗೆ ಆಗಮಿಸಿದ್ದ ವೇಳೆ ಕ್ರಷರ್ ನ ಗೇಟ್ನ ಬಳಿಗೆ ಬಂದಾಗ ಆರೋಪಿಗಳಾದ ತಾ.ಪಂ. ಸದಸ್ಯ ರುಕ್ಕಯ್ಯ ಪೂಜಾರಿ, ನೆಲ್ಲಿಕಾರು ಪಂಚಾಯಿತಿ ಸದಸ್ಯ ಶಶಿ ಪೂಜಾರಿ ಹಾಗೂ ಶಿವಪ್ಪ ಪೂಜಾರಿ, ಕ್ರಷರ್ನ ಪಾಲುದಾರ ಸುಧೀರ್, ಡ್ರೈವರ್ ರಾಜೇಶ್ ಹಾಗೂ ಅಲ್ಲಿನ ಉದ್ಯೋಗಿ ರಾಜೇಶ್ ಸೇರಿ ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವುದಾಗಿ ದೂರು ನೀಡಿದ್ದಾರೆ. ತಾ.ಪಂ.ಸದಸ್ಯ ರುಕ್ಕಯ್ಯ ಪೂಜಾರಿ ರತ್ನವರ್ಮ ಜೈನ್ ವಿರುದ್ಧ ಪ್ರತಿದೂರು ನೀಡಿದ್ದು ತಾನು ಅಧಿಕಾರಿಗಳ ಜೊತೆ ದಾರಿಯ ವಿವಾದಕ್ಕೆ ಸಂಬಂಧಿಸಿ ಸ್ಥಳ ಪರಿಶೀಲನೆಗೆ ಹೋದಾಗ ರತ್ನವರ್ಮ ಜೈನ್ ಅವಾಚ್ಯ ಶಬ್ದಗಳಿಂದ ಬೈದು ಎದೆಗೆ ಹೊಡೆದು ಉಸಿರಾಟಕ್ಕೆ ತೊಂದರೆಯುಂಟುಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕ್ರಷರ್ ಸಂಸ್ಥೆಯ ಉದ್ಯೋಗಿ ಸುಭಾಸ್, ರಾಮಪ್ಪ, ಲಮಾಣಿ, ತಾನು ಊಟಕ್ಕಾಗಿ ಕ್ರಷರ್ನಿಂದ ಹೊರಬರುವ ವೇಳೆ ರತ್ನವರ್ಮ ಜೈನ್ ಅವಾಚ್ಯ ಶಬ್ದಗಳಿಂದ ಬೈದಿರುವರೆಂದು ಪ್ರತ್ಯೇಕ ದೂರು ನೀಡಿದ್ದಾರೆ.
