ಮೂಡುಬಿದಿರೆ:ಫುಟ್ಬಾತ್ ಹಾಗೂ ಪಿಡಬ್ಯುಡಿ ರಸ್ತೆ ಅತಿಕ್ರಮಿಸಿ ನಡೆಯುತ್ತಿದ್ದ ಅಕ್ರಮ ವ್ಯಾಪಾರ ಪ್ರದೇಶಗಳಿಗೆ ಪುರಸಭೆ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ ನಡೆಸಿ ಅಕ್ರಮ ವ್ಯಾಪಾರವನ್ನು ತೆರವುಗೊಳಿಸಿ ಸ್ವತ್ತುಗಳನ್ನು ಸೀಝ್ ಮಾಡಿರುತ್ತಾರೆ.
ನಗರದೊಳಗಿನ ಅಕ್ರಮ ವ್ಯಾಪಾರವನ್ನು ತೆರವುಗೊಳಿಸಬೇಕೆಂದು ಕೊರಗಪ್ಪ, ಹನೀಪ್ ಅಲಂಗಾರ್, ಬಾಹುಬಲಿ ಪ್ರಸಾದ್, ಪ್ರೇಮಾ ಸಾಲ್ಯಾನ್ ಇತ್ತೀಚೆಗೆ ನಡೆದ ಎರಡು ಮಾಸಿಕ ಸಭೆಗಳಲ್ಲಿ ತೀವ್ರ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಾಧಿಕಾರಿ ಶೀನನಾಯ್ಕ್ ನೇತ್ರತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆಗಿಳಿಯಿತು. ಹಳೆ ಪುರಸಭೆ ಕಚೇರಿ ಬಳಿಯಿದ್ದ ಬಾರೊಂದು ರಸ್ತೆ ಬದಿಯಲ್ಲಿ ಕಾನೂನು ಬಾಹಿರವಾಗಿ ಹಾಕಿದ್ದ ನೋಪಾರ್ಕಿಂಗ್ ಬೋರ್ಡನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆ ಮುಂದುವರಿಸಿದ ಅಧಿಕಾರಿಗಳು ನಗರದ ವಿವಿದೆಡೆ ರಸ್ತೆ, ಪಾರ್ಕಿಂಗ್ ಜಾಗವನ್ನು ಅತಿಕ್ರಮಿಸಿರುವ ಅಕ್ರಮ ವ್ಯಾಪಾರವನ್ನು ತೆರವುಗೊಳಿಸಿ ಅಲ್ಲಿದ್ದ ಸ್ವತ್ತುಗಳನ್ನು ವಶಕ್ಕೆ ತೆಗೆದುಕೊಂಡರು.

ಮಾತಿನ ಚಕಮಕಿ: ಸಮಾಜ ಮಂದಿರ ಸಂಕೀರ್ಣದಲ್ಲಿರುವ ನವಮಿ ಮಾರ್ಟ್ ನ ಅಕ್ರಮ ವ್ಯಾಪಾರವನ್ನು ತೆರವುಗೊಳಿಸಲು ಹೋದಾಗ ಅಂಗಡಿ ಮಾಲಕ ನಂದಕುಮಾರ್ ಕುಡ್ವ ಆಕ್ಷೇಪ ವ್ಯಕ್ತಪಡಿಸಿ ನೀವು ಪದೇ ಪದೇ ನನ್ನ ಅಂಗಡಿಯನ್ನೆ ಟಾರ್ಗೆಟ್ ಮಾಡುತ್ತಿದ್ದೀರಿ. ಎಲ್ಲಾ ಕಡೆ ಇರುವ ಅಕ್ರಮ ವ್ಯಾಪಾರವನ್ನು ತೆರವುಗೊಳಿಸಿ. ನಾನು ಪಿಡಬ್ಯುಡಿ ಜಾಗವನ್ನು ಅತಿಕ್ರಮಿಸಿಲ್ಲ. ಸರ್ವೆ ಮಾಡುವಂತೆ ಪತ್ರ ಕೊಟ್ಟಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕುಡ್ವಾ ನನ್ನನ್ನೆ ಟಾರ್ಗೆಟ್ ಮಾಡಿದರೆ ನಿಮ್ಮ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಾವು ಹಂತ ಹಂತವಾಗಿ ಎಲ್ಲಾ ಕಡೆ ಕಾರ್ಯಾಚರಣೆ ನಡೆಸುತ್ತಿದ್ದೇವೆ. ನೀವು ಯಾರ ಬಳಿ ಹೋದರೂ ಪರ್ವಾಗಿಲ್ಲ ನಾವು ನಮ್ಮ ಕೆಲಸವನ್ನು ಕಾನೂನು ಬದ್ಧವಾಗಿ ಮಾಡುತ್ತಿದ್ದೇವೆ ಎಂದು ಮುಖ್ಯಾಧಿಕಾರಿ ಉತ್ತರಿಸಿದರು. ಅಲ್ಲಿದ್ದ ಟೇಬಲ್, ಕುರ್ಚಿ , ಇನ್ನಿತರ ಸ್ವತ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡಕೊಂಡರು. ಹತ್ತಿರದ ಜಯಶ್ರೀ ಹೊಟೇಲ್ನ ಹೊರಗಡೆಯಿದ್ದ ಫಾಸ್ಟ್ಪುಡ್ ಕೌಂಟರನ್ನು ಅಧಿಕಾರಿಗಳು ವಶಕ್ಕೆ ಪಡಕೊಂಡರು. ಮೊದಲ ಮಹಡಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಪುರಸಭೆ ಸಿಬಂದಿಗಳ ಮೇಲೆ ಮೊಟ್ಟೆ ಎಸೆದು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಘಟನೆ ನಡೆಯಿತು. ರಸ್ತೆ ಬದಿಯಲ್ಲಿದ್ದ ಪ್ಯಾರಡೈಸ್ ಹಾಲ್ನ ಫಲಕವನ್ನು ತೆರವುಗೊಳಿಸಲಾಯಿತು. ಕಂದಾಯ ನಿರೀಕ್ಷಕ ಧನಂಜಯ್, ಆರೋಗ್ಯ ನಿರೀಕ್ಷಕಿ ಶ್ರೀಮತಿ ಇಂದು ಇತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

