ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನ ಎಎಸ್ಪಿ ಕಚೇರಿ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಗೆ ಕೂಡಲೇ ಸ್ವಂತ ಕಟ್ಟಡ ನಿರ್ಮಿಸಲು ಸೂಕ್ತ ಸರ್ಕಾರಿ ನಿವೇಶನ ಒದಗಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಗೃಹಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ತಾಲ್ಲೂಕಿನ ಬಸ್ತಿಪಡ್ಪು ಎಂಬಲ್ಲಿ ನಿರ್ಮಾಣಗೊಂಡ ಅಗ್ನಿಶಾಮಕ ಠಾಣೆ ನೂತನ ಕಟ್ಟಡವನ್ನು ಮಂಗಳವಾರ ಸಂಜೆ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.


ದೃಶ್ಯ ಮಾಧ್ಯಮ ನಿಯಂತ್ರಣ ಮತ್ತು ಸರ್ಕಾರಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ಈ ಜಿಲ್ಲೆಗೆ ಸಂಬಂಧಿಸಿದಂತೆ ಸಚಿವ ಬಿ.ರಮಾನಾಥ ರೈ ಅವರ ಎಲ್ಲಾ ಬೇಡಿಕೆಗಳನ್ನು ಕೂಡಾ ಈಡೇರಿಸುವುದಾಗಿ ತಿಳಿಸಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷಗಳು ಸುಳ್ಳು ಆರೋಪ ಹೊರಿಸುತ್ತಿದೆ. ಆದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದ್ದು, ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಪೊಲೀಸ್ ಸಿಬ್ಬಂದಿ ಕೊರತೆ ಮತ್ತು ವಸತಿ ಸಮಸ್ಯೆ ನೀಗಿಸಲು ಗೃಹ ಇಲಾಖೆಯು ಕ್ರಮ ಕೈಗೊಂಡಿದೆ, ಒಟ್ಟು 22,500 ಖಾಲಿ ಹುದ್ದೆಗಳ ಪೈಕಿ ಈಗಾಗಲೇ 18,500 ಮಂದಿ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಸಿದೆ. ಒಟ್ಟು 790 ಎಸೈ ಹುದ್ದೆಗಳ ಪೈಕಿ 290 ಮಂದಿಗೆ ತರಬೇತಿ ತರಬೇತಿ ಹಂತದಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಪೊಲೀಸರ ವಸತಿ ಕೊರತೆ ನಿವಾರಣೆಗೆ ಒಟ್ಟು 11,500 ವಸತಿ ಗೃಹ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದ್ದು, ಪಡಿತರ ಸಾಮಾಗ್ರಿ ವಿತರಣೆ ವ್ಯವಸ್ಥೆ ಸರಿಪಡಿಸಲಾಗಿದೆ. ಈ ನಡುವೆ ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣೆಗೆ ‘ಆರೋಗ್ಯ ಭಾಗ್ಯ’ ಯೋಜನೆ ಜಾರಿಗೊಳಿಸಿದೆ.
ಈಗಾಗಲೇ ನಾಲ್ಕು ‘ಕರಾವಳಿ ಪೊಲೀಸ್ ಠಾಣೆ’ ಮಂಜೂರುಗೊಳಿಸಲಾಗಿದ್ದು, ಎಕ್ಕೂರಿನ 20 ಎಕರೆ ಪ್ರದೇಶದಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್.ಎ.ಎಫ್.) ತರಬೇತಿ ಕೇಂದ್ರ ಆರಂಭಿಸಲಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಪೊಲೀಸ್ ಮಹಾನಿರೀಕ್ಷಕ ಸೀಮಂತ್ ಕುಮಾರ್ ಸಿಂಗ್, ಅಗ್ನಿಶಾಮಕ ಪೊಲೀಸ್ ಉಪ ಮಹಾನಿರ್ದೇಶಕ ಎಂ.ಚಂದ್ರಶೇಖರ್, ಮುಖ್ಯ ಅಗ್ನಿಶಾಮಕ ಅಧಿಕಾರಿ ಎಚ್.ಎಸ್.ವರದರಾಜನ್, ವಿಭಾಗೀಯ ಅಧಿಕಾರಿ ತಿಪ್ಪೇಸ್ವಾಮಿ, ಇನ್ಸ್ಪೆಕ್ಟರ್ ಶಿವಪ್ಪ ಗೌಡ, ಠಾಣಾಧಿಕಾರಿ ಸುಂದರ, ಐಜಿಪಿ ಅಮೃತ್ಪಾಲ್, ಎಸ್ಪಿ ಡಾ.ಶರಣಪ್ಪ, ಪುರಸಭಾಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಯಾಸ್ಮಿನ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ.ಮಾಯಿಲಪ್ಪ ಸಾಲ್ಯಾನ್ ಮತ್ತು ಅಬ್ಬಾಸ್ ಆಲಿ, ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಮುಕಂಡ ಪಿಯೂಸ್ ಎಲ್.ರೋಡ್ರಿಗಸ್ ಮತ್ತಿತರರು ಇದ್ದರು.
ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ನಗರ ಮತ್ತು ಗ್ರಾಮಾಂತರ ಠಾಣಾಧಿಕಾರಿ ನಂದಕುಮಾರ್ ಮತ್ತು ರಕ್ಷಿತ್ ಕುಮಾರ್ ಬಿಗಿ ಬಂದೋಬಸ್ತು ಒದಗಿಸಿದ್ದರು.

