ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ
ಅಡ್ಯನಡ್ಕ: ಇಲ್ಲಿನ ಜನತಾ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಮೇ ೩೧ರಂದು ಜರುಗಿತು.ಶಾಲಾ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಬಳಿಕ ಸರಕಾರದಿಂದ ಸರಬರಾಜು ಮಾಡಲಾದ ಉಚಿತ ಪಠ್ಯಪುಸ್ತಕಗಳನ್ನು ಅವರು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.

ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಎಸ್. ರಾಜಗೋಪಾಲ ಜೋಶಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿದ್ಯಾರ್ಥಿ ಗಳಿಗೆ ಶಾಲಾ ಶಿಸ್ತು ಪಾಲನೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಡಿ. ಶ್ರೀನಿವಾಸ್ ಮಾತನಾಡಿದರು. ಇದೇ ಸಂರ್ಭದಲ್ಲಿ ವಿಜ್ಞಾನ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ವಿಜ್ಞಾನ ಸಂಘದ ಮಾರ್ಗದರ್ಶಕ ಶಿಕ್ಷಕಿ ಶ್ರೀಮತಿ ಕುಸುಮಾವತಿ ಅವರು ಮಾಹಿತಿ ನೀಡಿದರು.
ಜನತಾ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಪಿ. ಉದಯಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಅಧ್ಯಾಪಕರಾದ ಶ್ರೀ ಶಿವಕುಮಾರ್ ಸಾಯ ಅವರು ಕಾರ್ಯ ಕ್ರಮ ನಿರೂಪಿಸಿ, ಗಣಿತ ಸಹಶಿಕ್ಷಕಿ ಶ್ರೀಮತಿ ಗೀತಾ ಎಚ್. ಶೆಟ್ಟಿ ಅವರು ವಂದಿಸಿದರು.
ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮಧ್ಯಾಹ್ನ ಬಿಸಿಯೂಟದೊಂದಿಗೆ ಪಾಯಸದ ಔತಣವನ್ನು ವಿದ್ಯಾರ್ಥಿಗಳಿಗೆ ಉಣಬಡಿಸಲಾಯಿತು.