ಬಂಟ್ವಾಳ: ಒಂದು ನಾಮಪತ್ರ ವಾಪಾಸ್ ,ಐವರು ಕಣದಲ್ಲಿ
ಬಂಟ್ವಾಳ: ಕರ್ನಾಟಕ ವಿಧಾನಸಭೆಯ ಚುನಾವಣೆಯ ಹಿನ್ನಲೆಯಲ್ಲಿ ಸೋಮವಾರ( ಎ.೨೪) ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆದಿನವಾಗಿದ್ದು, 205 – ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಯ ಡಮ್ಮಿ ಅಭ್ಯರ್ಥಿ ಅಬ್ದುಲ್ ಮಜೀದ್ ಖಾನ್ ರವರು ಮಾತ್ರ ನಾಮಪತ್ರ ವಾಪಸ್ ಪಡೆದಿದ್ದು,ಉಳಿದಂತೆ ಐವರು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ, ಎಸ್ ಡಿ ಪಿ ಐ ಅಭ್ಯರ್ಥಿ ಮಹಮ್ಮದ್ ಇಲ್ಯಾಸ್ ತುಂಬೆ, ಜೆಡಿಎಸ್ ನಿಂದ ಪ್ರಕಾಶ್ ರಫಾಯಲ್ ಗೋಮ್ಸ್ , ಅಮ್ ಆದ್ಮಿಪಾರ್ಟಿಯ ಪುರುಷೋತ್ತಮ್ ಅವರು ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಅನೀಶ್ ಶೆಟ್ಟಿ ಹಾಗೂ ಪಕ್ಷೇತರ ಅಭ್ಯರ್ಥಿ ಬಿ.ಟಿ.ಕುಮಾರ್ ಅವರ ನಾಮಪತ್ರ ಪರಿಶೀಲನೆಯ ಸಂದರ್ಭದಲ್ಲಿ ನಾನಾ ಕಾರಣಕ್ಕೆ ತಿರಸ್ಕೃತಗೊಂಡಿತ್ತು.
ಏಜೆಂಟರ ಸಭೆ;
ಬಿ.ಸಿ.ರೋಡಿನ ಆಡಳಿತ ಸೌಧದಲ್ಲಿರುವ ಚುನಾವಣಾಧಿಕಾರಿಯವರ ಕಛೇರಿಯಲ್ಲಿ ಚುನಾವಣಾ ವೀಕ್ಷಕರ ಉಪಸ್ಥಿತಿಯಲ್ಲಿ, ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಮತ್ತು ಏಜೆಂಟ್ ರ ಸಭೆ ನಡೆಯಿತು. ಸಭೆಯಲ್ಲಿ ಚಿಹ್ನೆಗಳ ಹಂಚಿಕೆ ಮಾಡಲಾಯಿತು. ರಾಷ್ಟ್ರೀಯ ಪಕ್ಷಗಳಿಂದ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಈಗಾಗಲೇ ಚಿಹ್ನೆ ಹಂಚಿಕೆಯಾಗಿರುವುದರಿಂದ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿಗೆ ‘ಅಟೋ ರಿಕ್ಷಾ’ ಚಿಹ್ನೆಯನ್ನು ನೀಡಲಾಯಿತು. ಶಾಂತಯುತ ಚುನಾವಣೆ ಸಹಕರಿಸುವಂತೆ ಚುನಾವಣಾಧಿಕಾರಿಯವರು ಈ ಸಂದರ್ಭ ಮನವಿ ಮಾಡಿದರು.
ಬಂಟ್ವಾಳ ಕ್ಷೇತ್ರದ ಮಟ್ಟಿಗೆ ಐವರು ಕಣದಲ್ಲಿದ್ದರೂ ನೇರ ಸ್ಪರ್ಧೆ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಮಾತ್ರ..