ಮಂಗಳೂರು: ಸರ್ಕಾರದ ವಿರುದ್ಧ ನಿರಂತರ ವರದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಟಿವಿ9 ಚಾನೆಲ್ ಅನ್ನು ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ಗಳ ಮೇಲೆ ಒತ್ತಡ ಹೇರಿದ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಅವರು `ಸರಕಾರದ ಮಾನ ಹರಾಜು ಹಾಕುವ ಕೆಲಸ ಮಾಡ್ಬೇಡಿ’ ಎಂದು ಬಹಿರಂಗ ಎಚ್ಚರಿಕೆ ನೀಡಿದರು.
`ಮನುಷ್ಯ ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪನ್ನು ತಿದ್ದಿಕೊಂಡು ಕ್ಷಮೆ ಕೇಳುವುದು ದೊಡ್ಡತನ. ಒಂದು ಕಾಲದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ ಪ್ರಧಾನಿ ಇಂದಿರಾಗಾಂಧಿಯವರು ದೇಶದ ಜನರಲ್ಲಿ ಕ್ಷಮೆಯಾಚಿಸಿದ್ದರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಡಿ.ಕೆ ಶಿ ಅವರು ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ಪತ್ರಿಕಾರಂಗದ ಕತ್ತು ಹಿಸಕುವ ಕಾರ್ಯ ಮಾಡುತ್ತಿದ್ದಾರೆ. ಇದನ್ನು ನಾನು ಯಾವತ್ತೂ ಸಮರ್ಥನೆ ಮಾಡುವುದಿಲ್ಲ’ ಎಂದು ಪೂಜಾರಿ ಹೇಳಿದರು.
`ನಿಮ್ಮನ್ನು ಯಾರೂ ಕೇಳುವವರೇ ಇಲ್ಲ ಎಂದು ಅಂದುಕೊಂಡಿದ್ದೀರಾ. ಇಂತಹ ದುರ್ವತನೆಯಿಂದಾಗಿ ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವಕ್ಕೆ ಧಕ್ಕೆಯುಂಟಾಗುತ್ತದೆ. ಮಾಡಿರೋ ತಪ್ಪನ್ನು ಸರಿಪಡಿಸಿ ಕ್ಷಮೆ ಕೇಳಿದರೆ ನಿಮ್ಮ ಗಂಟೇನು ಹೋಗುತ್ತದೆ? ಮುಖ್ಯಮಂತ್ರಿ ಕೂಡಲೇ ಪರಿಸ್ಥಿತಿ ಸರಿಪಡಿಸಲಿ’ ಎಂದರು.

