Published On: Mon, Apr 17th, 2023

ಕಾವೂರಿನಲ್ಲಿ ಮಂಗಳೂರು ನಗರ ಉತ್ತರ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ

ವಿಪಕ್ಷಗಳ `ಗ್ಯಾರಂಟಿ’ಗೆ ಎಲ್ಲಿಂದ ಅನುದಾನ : ಡಾ. ಭರತ್ ಶೆಟ್ಟಿ ಸವಾಲ್

ಮಂಗಳೂರು : ಕಾವೂರು ಸೊಸೈಟಿ ಸಭಾಗೃಹದಲ್ಲಿ ವ್ಯವಸ್ಥೆಗೊಳಿಸಲಾದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಾಲಯ ಭಾನುವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು.

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ೨ನೇ ಬಾರಿ ಸ್ಪರ್ಧೆಗಿಳಿದ ಹಾಲಿ ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ಯಾವುದೇ ಕೆಲಸ ಶಾಸಕನೊಬ್ಬನೇ ಮಾಡಿದ್ದಾನೆ ಎನ್ನುವಂತಿಲ್ಲ. ಆತನ ಕೆಲಸದ ಹಿಂದಿರುವ ಅದೆಷ್ಟೋ ಕಾರ್ಯಕರ್ತರ ಶ್ರಮ ಮರೆಯುವಂತಿಲ್ಲ. ಪಕ್ಷದ ದೃಷ್ಟಿಯಲ್ಲಿ ಹಿಂದಿಗಿತ ಈ ಬಾರಿಯ ಚುನಾವಣೆ ಭಿನ್ನವಾಗಿದ್ದು, ಹಿಂದೆ ಅಭಿವೃದ್ಧಿ ಕಾರ್ಯದ ಬದಲು ಪಕ್ಷ ಸಿದ್ಧಾಂತ ಮುಂದಿಟ್ಟು ಮತದಾರರ ಬಳಿ ಹೋಗಿದ್ದೇವೆ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತವಾಗಿದ್ದರೂ, ಕ್ಷೇತ್ರದಲ್ಲಿ ೨೫೦೦ ಕೋ. ರೂ. ಅನುದಾನದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯ ಪ್ರತಿ ಮನೆಯವರಿಗೂ ಮನದಟ್ಟು ಮಾಡುವ ಅಗತ್ಯವಿದೆ. ಹೀಗಿದ್ದರೆ ಮಾತ್ರ ಈ ಬಾರಿ ಗೆಲುವಿನ ಅಂತರ ೨೬,೦೦೦ದಿಂದ ೫೬,೦೦೦ ದಾಟಬಹುದು. ಈ ನಿಟ್ಟಿನಲ್ಲಿ ಪಕ್ಷ ಕಾರ್ಯಕರ್ತರು ಅಹರ್ನಿಶಿ ಕೆಲಸ ಮಾಡಬೇಕಿದೆ ಎಂದರು.

ಪ್ರಸಕ್ತ ಮನಪಾದಲ್ಲಿ ದಾಖಲೆಯ ೨೦ ಸದಸ್ಯ ಬಲ ಹೊಂದಿದ್ದೇವೆ. ಬಿಜೆಪಿಯ ಒಂದೂ ಸದಸ್ಯರಿಲ್ಲದ ಪಂಚಾಯತ್‌ಗಳಲ್ಲಿ ಈಗ ಬಿಜೆಪಿ ಬೆಂಬಲಿತರು ಅಧಿಕಾರ ಸ್ಥಾಪಿಸುವಂತಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕ್ಷೇತ್ರ ವ್ಯಾಪ್ತಿಯಲ್ಲಿ ೬೦ ಕೋ. ರೂ. ಅಭಿವೃದ್ಧಿ ಕೆಲಸ ನಡೆದಿದೆ. ರಾಜ್ಯದಲ್ಲೇ ಸುರತ್ಕಲ್‌ನಲ್ಲಿ ಸ್ಮಾರ್ಟ್ ಬಸ್ ತಂಗುದಾಣ ಮತ್ತು ಎಡಪದವಿನಲ್ಲಿ ಒಣ ತ್ಯಾಜ್ಯ ವಿಲೇವಾರಿಗೆ ಎಂಆರ್‌ಎಫ್ ಘಟಕ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ರಸ್ತೆ, ನೀರಿನಂತಹ ಮೂಲ ಸೌಕರ್ಯ ಒದಗಿಸಲಾಗಿದೆ. ಅರ್ಹರಿಗೆ ಹಕ್ಕುಪತ್ರ ನೀಡಲಾಗಿದೆ. ಈ ಎಲ್ಲ ಅಭಿವೃದ್ಧಿ ಕೆಲಸಗಳ ಜೊತೆಗೆ ರಾಷ್ಟçಪ್ರಜ್ಞೆಯಿಂದ ಗೋಹತ್ಯೆ ನಿಷೇಧ, ಹಿಂದೂತ್ವಕ್ಕಾಗಿ ವಸ್ತುನಿಷ್ಠ ಕೆಲಸ ಮಾಡಿರುವ ತೃಪ್ತಿ ಇದ್ದು, ಇದು ಜನರಿಗೆ ಮನದಟ್ಟಾಗಬೇಕು ಎಂದರು.

ಈ ಬಾರಿ ವಿರೋಧ ಪಕ್ಷಗಳು ಮತದಾರರ ಓಲೈಸಲು ಕೆಲವು ಉಚಿತ ಗ್ಯಾರಂಟಿ ಆಶ್ವಾಸನೆ ನೀಡುತ್ತಿದೆ. ಆದರೆ ಉಚಿತವಾಗಿ ವಿದ್ಯುತ್, ಹಣ, ಅಕ್ಕಿ ಕೊಡಲು ಅವರಿಗೆ ಅನುದಾನ ಎಲ್ಲಿಂದ ಬರಬೇಕು ಎಂದು ಮತದಾರರು ಪ್ರಶ್ನಿಸುವಂತಾಗಬೇಕು. ಪ್ರಚಾರ ಸಂದರ್ಭದಲ್ಲಿ ಈ ವಿಷಯಗಳತ್ತ ಹೆಚ್ಚು ಗಮನ ಹರಿಸಬೇಕು ಎಂದು ಕಾರ್ಯಕರ್ತರಿಗೆ ಡಾ. ಭರತ್ ಶೆಟ್ಟಿ ಸೂಚಿಸಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಮಾತನಾಡಿ, ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಪಕ್ಷ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಈ ವಿಷಯ ಮುಂದಿಟ್ಟುಕೊಂಡು ಮತದಾರರ ಮನವೊಲಿಸಲು ಪ್ರಯತ್ನಿಸಬೇಕು. ಈ ಬಾರಿ ಡಾ. ಭರತ್ ಶೆಟ್ಟಿ ಅವರು ಕಳೆದ ಬಾರಿಯ ಚುನಾವಣೆಗಿಂತ ಎರಡು ಪಟ್ಟು ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸುವಂತೆ ಕೆಲಸ ಮಾಡಬೇಕು. ಇದು ಬಿಜೆಪಿ ಕಾರ್ಯಕರ್ತರಿಂದ ಸಾಧ್ಯ ಎಂದರು.

ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸ ಕಂಡಿದ್ದ ಪದವು ಉಮೇಶ್ ಶೆಣೈ ಮಾತನಾಡಿ ಬಿಜೆಪಿ ಕಾರ್ಯಕರ್ತರು ಮನಸ್ಸು ಮಾಡಿದರೆ, ಈ ಬಾರಿ ಮಂಗಳೂರು ನಗರ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಿಂದ ರಾಜ್ಯದಲ್ಲೇ ದಾಖಲೆ ಅಂತರದ ಗೆಲುವು ಸಾಧ್ಯವಿದೆ. ಡಾ. ಭರತ್ ಶೆಟ್ಟಿಯವರಿಗೆ ಸಚಿವ ಪದವಿಯೂ ಸಿಗುವಂತಾಗಲಿ ಎಂದು ಹಾರೈಸಿದಿರು.

ಉತ್ತರ ಮಂಡಲದ ಬಿಜೆಪಿ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ ಸ್ವಾಗತಿಸಿದರು. ಜಿಲ್ಲಾ ಮಾಧ್ಯಮ ಪ್ರಮುಖ್ ರಣದೀಪ್ ಕಾಂಚನ್, ಜಿಲ್ಲಾ ವಕ್ತಾರ ಜಗದೀಶ ಶೇಣವ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಕೊಟ್ಟಾರಿ ಮತ್ತು ಸಂದೀಪ್ ಪಚ್ಚನಾಡಿ, ಚುನಾವಣಾ ಉಸ್ತುವಾರಿಯ ಕೃಷ್ಣ ಶೆಟ್ಟಿ ಕಡಬ, ಚುನಾವಣಾ ನಿರ್ವಹಣಾ ಪ್ರಮುಖ ಶರಶ್ಚಂದ್ರ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಮೇಯರ್ ಜಯಾನಂದ ಅಂಚನ್, ಪ್ರಭಾ ಮಾಲಿನಿ, ಹಿರಿಯ ಬಿಜೆಪಿಗ ವಿಶ್ವನಾಥ ಶೆಟ್ಟಿ, ಮನಪಾ ಬಿಜೆಪಿ ಕಾರ್ಪೊರೇಟರ್‌ಗಳು, ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರಶಾಂತ್ ಪೈ ನಿರೂಪಿಸಿದರೆ, ಮಹೇಶ್ ಮೂರ್ತಿ ವಂದಿಸಿದರು.

ಬಿ. ಎಲ್. ಸಂತೋಷ್ ಭೇಟಿ :

ಕಾವೂರು ಸೊಸೈಟಿ ಸಭಾಗೃಹದಲ್ಲಿ ತೆರೆಯಲಾದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯಾಲಯಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಭೇಟಿ ನೀಡಿ, ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ಹಾಗೂ ಪಕ್ಷ ಪ್ರಮುಖರೊಂದಿಗೆ ಮಹತ್ವದ ಚರ್ಚೆ ನಡೆಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter