ಬಂಟ್ವಾಳ: ಕಾಂಗ್ರೆಸ್ ಸಮಾಲೋಚನಾ ಸಭೆ, ಎಸ್ ಡಿಪಿಐ ಕಾರ್ಯಕರ್ತರು ಸೇರ್ಪಡೆ: ೨೦ರಂದು ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ನಾಮಪತ್ರ ಸಲ್ಲಿಕೆ
ಬಂಟ್ವಾಳ:ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಇದೇ ೨೦ರಂದು ನಾಮಪತ್ರ ಸಲ್ಲಿಸಲಿದ್ದು, ಅಂದು ಬೆಳಿಗ್ಗೆ ೯ ಗಂಟೆಗೆ ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ಪಾದಯಾತ್ರೆ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸುವರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡು ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಬಿ.ರಮಾನಾಥ ರೈ ಮಾತನಾಡಿ, ಈ ಹಿಂದೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ್ದ ಎಲ್ಲಾ ಭರವಸೆ ಈಡೇರಿಸಿದ್ದು, ಈ ಬಾರಿ ಉಚಿತ ಅಕ್ಕಿ ಮತ್ತು ವಿದ್ಯುತ್ ಸಹಿತ ಮಾಶಾಸನ ಮತ್ತಿತರ ಗ್ಯಾರಂಟಿ ಕಾರ್ಡಿನಲ್ಲಿ ನೀಡಿರುವ ಎಲ್ಲಾ ಭರವಸೆ ಈಡೇರಿಸುವುದು ಖಚಿತ ಎಂದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಪಿಯೂಸ್ ಎಲ್.ರಾಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಪದ್ಮನಾಭ ರೈ, ಅಬ್ಬಾಸ್ ಆಲಿ, ಲುಕ್ಮಾನ್ ಬಂಟ್ವಾಳ, ಜನಾರ್ಧನ ಚೆಂಡ್ತಿಮಾರ್, ಸುರೇಶ್ ಕುಮಾರ್ ನಾವೂರ, ಉಮೇಶ ಬೋಳಂತೂರು, ಸಿದ್ದಿಕ್, ಜಯಂತಿ ಪೂಜಾರಿ ಮತ್ತಿತರರು ಇದ್ದರು.
ಇದೇ ವೇಳೆ ಬಿ.ಜೆ.ಪಿ. ಮತ್ತು ಎಸ್ ಡಿಪಿಐ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.