ಶಿವಮೊಗ್ಗ: ನಾನು ನನ್ನ ಜೀವನದಲ್ಲಿ ಹಲಾಲ್ (Halal) ಕಟ್ ಮಾಂಸ ತಿಂದಿಲ್ಲ, ಮುಂದೆಯೂ ತಿನ್ನುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ತಿಳಿಸಿದರು.

ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಲಾಲ್ ಕಟ್, ಜಟಕಾ ಕಟ್ ಎಂಬ ಚರ್ಚೆ ನಡೆಯುತ್ತಿದೆ. ಆದರೆ ನನಗೆ ಹಲಾಲ್ ಕಟ್ಟೋ, ಹಲ್ಕ ಕಟ್ಟೋ ಗೊತ್ತಿಲ್ಲ. ನಾವು ಏಕೆ ನಮ್ಮ ದೇವರಿಗೆ ಹಲಾಲ್ ಕಟ್ ಮಾಂಸ ಎಡೆ ಇಡೋಣ ಎಂದರು.

ಹಲಾಲ್ನಿಂದ ಸಂಗ್ರಹವಾದ ಹಣವನ್ನು ಅವರು ಭಯೋತ್ಪಾದಕ ಕೃತ್ಯಕ್ಕೆ, ಬಾಂಬ್ ಹಾಕುವುದಕ್ಕೆ ಬಳಸುತ್ತಾರೆ. ಹಾಗಾಗಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಈ ಅಭಿಯಾನ ಆರಂಭವಾಗಿತ್ತು. ಇದೀಗ ದೀಪಾವಳಿ ಹಬ್ಬದಲ್ಲೂ ಈ ಅಭಿಯಾನ ಮತ್ತೆ ಗರಿಗೆದರಿದೆ. ಹಿಂದೂ ಸಮಾಜ ದಿನೇ ದಿನೇ ಈ ವಿಷಯದಲ್ಲಿ ಜಾಗೃತಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ನ (Congress) ಸೇ ಸಿಎಂ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದಿನ ಸಿದ್ದರಾಮಯ್ಯ (Siddaramaiah) ಅವರ ಸರ್ಕಾರದ ಅವಧಿಯಲ್ಲಿ ಚುನಾವಣೆಯ ಪ್ರಣಾಳಿಕೆಯಲ್ಲಿ ಉಲ್ಲೇಖಿತವಾದ 150 ಪ್ರಮುಖ ಅಂಶಗಳಲ್ಲಿ ಶೇ.90ರಷ್ಟು ಕೆಲಸ ಮುಗಿಸಿದ್ದೇವೆ ಎಂದು ಹೇಳಿದ್ದರು. ಆದರೆ ಶೇ.90 ರಷ್ಟು ಮುಗಿದಿರುವ ಕೆಲಸ ಯಾವುದು ಎಂದು ಕೇಳಿದರೆ ಯಾವುದಕ್ಕೂ ಅವರು ಉತ್ತರ ಕೊಡಲಿಲ್ಲ ಎಂದು ಟೀಕಿಸಿದರು.
ನಾವು ಈಗ ಭರವಸೆಯನ್ನು ಈಡೇರಿಸಿರುವ ಪಟ್ಟಿ ಇದೆ. ಎಸ್ಸಿ, ಎಸ್ಟಿ ಮೀಸಲಾತಿ, ಕಾಂತರಾಜು ವರದಿ ಮಂಡನೆ ಮಾಡಿದೆವು. ನಮ್ಮ ಕೈಯಲ್ಲಿ ಆಗಿದ್ದ ಕೆಲಸ ಅವರ ಕೈಯಲ್ಲಿ ಯಾಕೆ ಆಗಲಿಲ್ಲವೆಂದು ಪ್ರಶ್ನಿಸಿದರು.
