ಸುರತ್ಕಲ್: ಹೊರಜಿಲ್ಲೆಗಳ ಕೂಲಿ ಕಾರ್ಮಿಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಆರಂಭಗೊಂಡ ಜಗಳ ಒಬ್ಬನ ತಲೆಯನ್ನು ಇನ್ನೊಬ್ಬ ಒಡೆಯುವ ಮೂಲಕ ಪರ್ಯಾವಸಾನಗೊಂಡ ಘಟನೆ ಗುರುವಾರ ಮಧ್ಯಾಹ್ನ ಇಲ್ಲಿಗೆ ಸಮೀಪದ ಮುಕ್ಕ ಶ್ರೀನಿವಾಸ ಆಸ್ಪತ್ರೆ ಮುಂಭಾಗದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ನಿವಾಸಿ ಹನುಮಂತ(29) ಹಾಗೂ ಮಂಡ್ಯ ನಿವಾಸಿ ಚಂದ್ರಮೋಹನ(27) ಶ್ರೀನಿವಾಸ ಆಸ್ಪತ್ರೆಯ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಗುರುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಇವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಈ ವೇಳೆ ಕೋಪೋದ್ರಿಕ್ತನಾದ ಹನುಮಂತ ಕಲ್ಲು ಹಾಗೂ ಮರದ ತುಂಡಿನಿಂದ ಚಂದ್ರಮೋಹನ ಮೇಲೆ ದಾಳಿ ನಡೆಸಿ ಆತನ ತಲೆ ಒಡೆದಿದ್ದಾನೆ.
ಇವರಿಬ್ಬರ ಜಗಳ-ಹೊಡೆದಾಟವನ್ನು ಅಷ್ಟರವರೆಗೆ ಮೂಕಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದ ಸಾರ್ವಜನಿಕರು ಓಡಿಬಂದು ಚಂದ್ರಮೋಹನನನ್ನು ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹನುಮಂತನನ್ನು ಸ್ಥಳೀಯರು ಹಿಡಿದು ಸುರತ್ಕಲ್ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾಸ್ಥಳಕ್ಕೆ ಇನ್ನಷ್ಟೇ ಆಗಮಿಸಬೇಕಿದೆ.



