ಉಡುಪಿ: ಕಳೆದ ಅಕ್ಟೋಬರ್ ??ರಂದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ರಾಡಿ ಗ್ರಾಮದ ಪರೀಕ ಎಂಬಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜುಗಾರಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದ ಎಸ್.ಐ. ರಫೀಕ್ ಅವರು ಕರ್ತವ್ಯಲೋಪ ಎಸಗಿದ್ದಾರೆಂದು ಆರೋಪಿಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ.

ರಫೀಕ್ ಅವರು ಈ ಹಿಂದೆ ಪುತ್ತೂರು ನಗರ ಠಾಣೆಯಲ್ಲಿ ಎಎಸ್ಐ ಆಗಿದ್ದರು. ಈ ಸಂದರ್ಭದಲ್ಲೂ ಅವರ ಮೇಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಕರ್ತವ್ಯಲೋಪದ ಆರೋಪ ಕೇಳಿಬಂದಿತ್ತು. ಹಿರಿಯಡ್ಕ ಠಾಣೆಗೆ ಎಸ್.ಐ. ಆಗಿ ಬಂದನಂತರ ಠಾಣಾ ವ್ಯಾಪ್ತಿಯಲ್ಲಿ ಜುಗಾರಿ, ಮಟ್ಕಾ ಅಡ್ಡೆ, ಕೋಳಿ ಅಂಕಗಳು ಅಲ್ಲಲ್ಲಿ ಪ್ರಾರಂಭವಾಗಿದೆ ಎಂದು ನಾಗರಿಕರ ಆರೋಪ ಕೂಡಾ ಕೇಳಿಬರುತ್ತಿದೆ.
ಸಾಮಾನ್ಯವಾಗಿ ಪೊಲೀಸರು ಜುಗಾರಿ ಇಲ್ಲವೇ ಅಕ್ರಮ ದಂಧೆಗಳು ನಡೆಯುತ್ತಿರುವಲ್ಲಿ ದಾಳಿ ನಡೆಸಿದಾಗ ಮಹಜರು ಮಾಡುವುದನ್ನು ವಿಡಿಯೋ ಚಿತ್ರೀಕರಣ ಮಾಡಬೇಕೆಂಬ ನಿಯಮವೂ ಇದೆ. ಅದರೆ ಎಸ್.ಐ. ಅವರು ಈ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗುತ್ತಿದೆ. ರಫೀಕ್ ವಿರುದ್ಧ ಇಲಾಖಾ ತನಿಖೆ ನಡೆಯಲಿದ್ದು, ಇನ್ನು ಮುಂದೆ ಜಿಲ್ಲೆಯಲ್ಲಿ ದಾಳಿ ನಡೆಯುವಾಗ ಪೊಲೀಸ್ ಇಲಾಖೆ ಮತ್ತು ಉಚ್ಛ ನ್ಯಾಯಾಲಯದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಸ್.ಪಿ. ಸೂಚಿಸಿದ್ದಾರೆ.
