ಪಡುಬಿದ್ರಿ: ಮೊದಲನೆಯ ಪತ್ನಿಯಲ್ಲಿ ಮೂವರು ಮಕ್ಕಳು ಮತ್ತು ಎರಡನೇ ಪತ್ನಿಯಲ್ಲಿ ಇಬ್ಬರು ಮಕ್ಕಳನ್ನು ಪಡೆದಿದ್ದರೂ ಮದುವೆಯಾಗಿ ವಂಚಿಸುವುದನ್ನೇ ಚಟ ಮಾಡಿಕೊಂಡಿದ್ದ ಭೂಪನೋರ್ವ ಮೂರನೇ ಮದುವೆಯಾಗಲು ಮುಂದಾಗಿ ಶಿರ್ವ ಠಾಣಾ ಪೊಲೀಸರ ವಶವಾದ ಘಟನೆ ಬುಧವಾರ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಿವಾಸಿ ರವಿ ಶಂಕೇರಪ್ಪ ನಾಯ್ಕ್(40) ಬಂಧಿತ ಆರೋಪಿ.
ರವಿ ಶಂಕೇರಪ್ಪ ನಾಯ್ಕ ಉಡುಪಿ ಸುತ್ತಮುತ್ತ ಕಟ್ಟಡಗಳಿಗೆ ಗಾರೆ ಕೆಲಸವನ್ನು ಮಾಡುತ್ತಿದ್ದು, ಶಿರ್ವ ಪದವು ಬಬ್ಬುಸ್ವಾಮಿ ದೈವಸ್ಥಾನ ಪಕ್ಕದ ನಿವಾಸಿ ಶಶಿಕಲಾ(30) ಎಂಬವರನ್ನು ಮದುವೆಯಾಗಲು ಮುಂದಾಗಿದ್ದ. ಆದರೆ ಈ ವಿಚಾರ ಎರಡನೇ ಪತ್ನಿಗೆ ತಿಳಿದಿದ್ದು ಆಕೆ ಶಶಿಕಲಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಳು. ರವಿಯ ನಿಜಬಣ್ಣ ಬಯಲಾಗುತ್ತಲೇ ಶಶಿಕಲಾ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಪ್ರಕರಣ ದಾಖಲಿಸಿಕೊಂಡ ಶಿರ್ವ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ನಾಯ್ಕ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿ ರವಿ ಎರಡನೇ ಪತ್ನಿಯ ಮನೆಯಲ್ಲಿ ವಾಸವಿದ್ದು, ಮೂರನೇ ಮದುವೆಯಾಗಲು ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

