ಬೆಂಗಳೂರು: ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇರ ಪಾತ್ರವಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ 545 ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮವೇ ನಡೆದಿಲ್ಲ ಎಂದಿದ್ದರು. ಈಗ ಸರ್ಕಾರ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಪಡಿಸಿ ಮರು ಪರೀಕ್ಷೆಗೆ ಮುಂದಾಗಿದೆ. ಸರ್ಕಾರ ಮರು ಪರೀಕ್ಷೆಗೆ ಮುಂದಾಗಿರುವುದು ಡ್ಯಾಮೇಜ್ ಕಂಟ್ರೋಲರ್ ತಂತ್ರವಷ್ಟೆ. ಆದರೆ ಗೃಹ ಸಚಿವರ ಪಾತ್ರವಿಲ್ಲದೇ ಪಿಎಸ್‍ಐ ಅಕ್ರಮ ನೇಮಕಾತಿ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಗೃಹ ಸಚಿವರ ನೇರ ಪಾತ್ರವಿದೆ. ಪ್ರಕರಣದ ಕಿಂಗ್‍ಪಿನ್ ಬಂಧಿತೆ ದಿವ್ಯಾ ಹಾಗರಗಿ ಮನೆಗೆ ಜ್ಞಾನೇಂದ್ರರವರು ಡೀಲಿಂಗ್ ಮಾಡಲು ಹೋಗಿದ್ದು ಸತ್ಯವಲ್ಲವೆ? ಪ್ರಕರಣದ ಬಗ್ಗೆ ಮಾಹಿತಿ ಕೊಡುವವರಿಗೆ ನೋಟಿಸ್ ಕೊಡುವ ಪಿಎಸ್‍ಐ ಜ್ಞಾನೇಂದ್ರರ ವಿಚಾರಣೆಯನ್ನು ಇನ್ನೂ ಯಾಕೆ ನಡೆಸಿಲ್ಲ? ಪಿಎಸ್‍ಐ ಯಾರನ್ನು ರಕ್ಷಿಸುತ್ತಿದೆ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ.

ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಾಥ್ ನೀಡಿರುವ ಆರೋಪದಡಿ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಸದ್ಯ 11 ದಿನಗಳ ಕಾಲ ದಿವ್ಯಾ ಹಾಗರಗಿಯನ್ನು ನ್ಯಾಯಾಲಯ ಸಿಐಡಿ ಕಸ್ಟಡಿಗೆ ನೀಡಿದೆ.

By suddi9

Leave a Reply

Your email address will not be published. Required fields are marked *