ಬಂಟ್ವಾಳ: ಲಯನ್ಸ್ ಕ್ಲಬ್ ವತಿಯಿಂದ ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ‘ಸುವರ್ಣ ಮಹೋತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಲಾಂಛನ ಅನಾವರಣಗೊಳಿಸಿದರು. ಡಾ.ವಸಂತ ಬಾಳಿಗಾ ಮತ್ತಿತರರು ಇದ್ದಾರೆ.
ಕಳೆದ ೫೦ ವರ್ಷಗಳ ಹಿಂದೆ ಆರಂಭಗೊಂಡ ಇಲ್ಲಿನ ಲಯನ್ಸ್ ಕ್ಲಬ್ ಸಮಾಜಮುಖಿ ಸೇವಾ ಚಟುವಟಿಕೆ ಮೂಲಕ ತನ್ನ ಗೌರವ ಹೆಚ್ಚಿಸಿಕೊಂಡಿದೆ. ಈ ವರ್ಷವಿಡೀ ನಡೆಯುವ ಸುವರ್ಣ ಮಹೋತ್ಸವ ಪ್ರಯುಕ್ತ ರೂ ೫೦ ಲಕ್ಷ ವೆಚ್ಚದಲ್ಲಿ ವಿವಿಧ ಸಾಮಾಜಿಕ ಕೊಡುಗೆ ನೀಡುವ ಯೋಜನೆ ಕೈಗೆತ್ತಿಕೊಳ್ಳುವುದಾಗಿ ಲಯನ್ಸ್ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ಲಯನ್ಸ್ ಕ್ಲಬ್ ಮತ್ತು ಸುವರ್ಣ ಮಹೋತ್ಸವ ಸಮಿತಿ ವತಿಯಿಂದ ಮಂಗಳವಾರ ರಾತ್ರಿ ಏರ್ಪಡಿಸಿದ್ದ ‘ಸುವರ್ಣ ಮಹೋತ್ಸವ ಸಂಭ್ರಮ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೇ ವೇಳೆ ಚುನಾಯಿತ ಲಯನ್ಸ್ ಜಿಲ್ಲಾ ಗವರ್ನರ್ ಸಂಜಿತ್ ಶೆಟ್ಟಿ ಸುವರ್ಣ ಮಹೋತ್ಸವದ ಲಾಂಛನ ಅನಾವರಣಗೊಳಿಸಿ, ಈದ್ ಕಾರ್ಯಕ್ರಮದ ಆಹ್ವಾನ ಪತ್ರ ಬಿಡುಗಡೆಗೊಳಿಸಿದರು.
ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಡಾ. ವಸಂತ ಬಾಳಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ. ಗೀತ ಪ್ರಕಾಶ್, ಚುನಾಯಿತ ಪ್ರಥಮ ಉಪ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜಾ, ಚುನಾಯಿತ ದ್ವಿತೀಯ ಉಪ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ., ಜಿಲ್ಲಾ ಪ್ರಥಮ ಮಹಿಳೆ ಡಾ. ದಿವ್ಯ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕೋಶಾಧಿಕಾರಿ ಜಯಂತ ಶೆಟ್ಟಿ, ಸಂಯೋಜಕ ಬಿ. ಶಿವಾನಂದ ಬಾಳಿಗ, ಲಿಯೋ ಕ್ಲಬ್ ಅಧ್ಯಕ್ಷೆ ಶರಲ್ ರೀಮಾ ಪಿರೇರಾ ಇದ್ದರು.
ಕ್ಲಬ್ಬಿನ ಅಧ್ಯಕ್ಷ ಡಾ. ಬಿ. ವಸಂತ ಬಾಳಿಗಾ ಸ್ವಾಗತಿಸಿ, ಕಾರ್ಯದರ್ಶಿ ಮಧ್ವರಾಜ್ ಬಿ.ಕಲ್ಮಾಡಿ ವಂದಿಸಿದರು, ಸದಸ್ಯರಾದ ಸುಧಾಕರ ಆಚಾರ್ಯ ಮತ್ತು ರಾಧಾಕೃಷ್ಣ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.
