ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನವು ರೂ ೩.೫೦ ಕೋಟಿ ವೆಚ್ಚದಲ್ಲಿ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿದ್ದು, ಇದೇ ೨೯ರಿಂದ ಮೇ ೫ರ ತನಕ ದೇವರಿಗೆ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದೆ ಎಂದು ಮಾಜಿ ಸಚಿವ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರೋತ್ಸಾಹ ಮತ್ತು ಕ್ಷೇತ್ರದ ತಂತ್ರಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮಾರ್ಗದರ್ಶನದಲ್ಲಿ ಬ್ರಹ್ಮಕಲಶದ ಸಿದ್ಧತೆ ನಡೆಯುತ್ತಿದೆ ಎಂದರು.
ಕ್ಷೇತ್ರದ ಹಿನ್ನೆಲೆ:
ಸುಮಾರು ೮೫೦ ವರ್ಷಗಳ ಹಿನ್ನೆಲೆ ಹೊಂದಿರುವ ಇಲ್ಲಿ ಸಿದ್ಧಿ ಸನ್ಯಾಸಿಯೊಬ್ಬರ ಅಪೇಕ್ಷೆಯಂತೆ ವೈಷ್ಣವರಿಂದ ದೇವರ ಆರಾಧನೆ ನಡೆದು ಬಳಿಕ ಸುಮಾರು ೫೦೦ ವರ್ಷಗಳ ಹಿಂದೆ ದೇವಸ್ಥಾನ ಶಿಥಿಲಾವಸ್ಥೆಗೊಂಡಿದೆ. ಇದೀಗ ಜ್ಯೋತಿಷಿ, ವಿದ್ವಾನ್ ಶ್ರೀಧರ ಗೋರೆ ನೆಲ್ಯಾಡಿ ಇವರ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಂತೆ ಶ್ರೀ ವಿಷ್ಣುಮೂರ್ತಿ ದೇವಾಲಯ ಸಹಿತ ಶ್ರೀ ಮಹಾಗಣಪತಿ, ಶ್ರೀ ಶಾಸ್ತವು, ಶ್ರೀ ಅನ್ನಪೂರ್ಣೆಶ್ವರೀ ಗುಡಿ ಮತ್ತು ಎರಡು ನಾಗಾಲಯ, ಸನ್ಯಾಸಿ ಕಟ್ಟೆ ನಿರ್ಮಾಣಗೊಂಡಿದೆ. ಶಿಲಾಮಯ ಗರ್ಭಗುಡಿ, ಮುಖ ಮಂಟಪ, ಕೆಂಪು ಕಲ್ಲಿನ ಆಕರ್ಷಕ ಸುತ್ತು ಪೌಳಿ, ವಸಂತ ಮಂಟಪ, ತೀರ್ಥಬಾವಿ, ಪುಷ್ಕರಿಣಿ, ಕೊಡಮಣಿತ್ತಾಯ, ರಕ್ತೇಶ್ವರಿ ಚಾವಡಿ, ಜನಾನ್ ದೈವ, ಪಂಜುರ್ಲಿ ದೈವಗಳಿಗೆ ಗುಡಿ, ಬ್ರಹ್ಮ ರಾಕ್ಷಸ
ಕಟ್ಟೆ, ಕಲ್ಲುರ್ಟಿ-ಕಲ್ಕುಡ ದೂಪ ನಿರ್ಮಾಣ, ಮೇಲ್ಛಾವಣಿಗೆ ತಾಮ್ರದ ಹೊದಿಕೆ, ರಾಜಾಂಗಣಕ್ಕೆ ಇಂಟರ್ಲಾಕ್ ಅಳವಡಿಸಲಾಗಿದೆ ಎಂದರು. ಸಮಿತಿ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲುಗುತ್ತು ಮಾತನಾಡಿ, ಶಾಸಕ ರಾಜೇಶ ನಾಯ್ಕ್ ಅವರು ರೂ ೫೦ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಸಂಪರ್ಕ ರಸ್ತೆ, ಹೈಮಾಸ್ಟ್ ದೀಪ ಮತ್ತು ಇಂಟರ್ ಲಾಕ್ ಅಳವಡಿಕೆಗೆ ಅನುದಾನ ಒದಗಿಸಿದ್ದಾರೆ ಎಂದರು.
ಹೊರೆ ಕಾಣಿಕೆ:
ಎ.೨೯ರಂದು ಶುಕ್ರವಾರ ಮಧ್ಯಾಹ್ನ ೨ ಗಂಟೆಗೆ ಬಿ.ಸಿ.ರೋಡು ರಕ್ತೇಶ್ವರಿ ದೇವಿ ದೇವಸ್ಥಾನ ಬಳಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡುವರು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಪದ್ಮಶೇಖರ ಜೈನ್, ಪ್ರಧಾನ ಕಾರ್ಯದರ್ಶಿ ಶಿವಪ್ಪ ಪೂಜಾರಿ ಹಟದಡ್ಕ, ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷೆ ಲಾವಣ್ಯ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಶಿವರಾಮ ಶೆಟ್ಟಿ ದೋಟ, ಟ್ರಸ್ಟಿ ರವೀಂದ್ರ ಟಿ.ಸಿ., ಸುದರ್ಶನ್ ಹಟದಡ್ಕ, ಬೇಬಿ ಕುಂದರ್ ಇದ್ದರು.
