ಬಂಟ್ವಾಳ : ತಾಲ್ಲೂಕಿನ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತು ಹಿಂದೂ ಜಾಗರಣ ವೇದಿಕೆ ಶ್ರೀ ದುರ್ಗಾ ಘಟಕದ ವತಿಯಿಂದ ಸಂಗ್ರಹಿಸಿದ ರೂ ೧.೫ಲಕ್ಷ ಮೊತ್ತದ ದೇಣಿಗೆಯನ್ನು ಕರೆಂಕಿ ನಿವಾಸಿ ೮ರ ಹರೆಯದ ನಿಶಾನ್ ಅವರ ಚಿಕಿತ್ಸೆಗಾಗಿ ಎ.24ರಂದು ಭಾನುವಾರ ಹಸ್ತಾಂತರಿಸಲಾಯಿತು.
ಇಲ್ಲಿನ ಕರೆಂಕಿ ನಿವಾಸಿ ೮ರ ಹರೆಯದ ನಿಶಾನ್ ಎಂಬವರು ಅಪಸ್ಮಾರ-ನ್ಯುಮೇನಿಯಾ ಖಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗಾಗಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತು ಹಿಂದೂ ಜಾಗರಣ ವೇದಿಕೆ ಶ್ರೀ ದುರ್ಗಾ ಘಟಕದ ವತಿಯಿಂದ ಸಂಗ್ರಹಿಸಿದ ರೂ ೧.೫ಲಕ್ಷ ಮೊತ್ತದ ದೇಣಿಗೆಯನ್ನು ಅವರ ತಾಯಿಗೆ ಭಾನುವಾರ ಹಸ್ತಾಂತರಿಸಲಾಯಿತು ಎಂದು ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ತಿರುಲೇಶ್ ಬೆಳ್ಳೂರು ಹೇಳಿದರು.
ಮೂಡನಡುಗೋಡು ಗ್ರಾಮದ ಕರೆಂಕಿ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಮಗುವಿನ ತಾಯಿ ಹರಿಣಾಕ್ಷಿ ಅವರಿಗೆ ಚೆಕ್ ಹಸ್ತಾಂತರಿಸಿ ಅವರು ಮಾತನಾಡಿದರು. ಅರ್ಚಕ ಮದನ್ ಭಟ್ ಪ್ರಾರ್ಥನೆ ನೆರವೇರಿಸಿದರು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಗೌಡ, ವಕೀಲ ರಾಮಚಂದ್ರ ಶೆಟ್ಟಿ ದಂಡೆ, ಟ್ರಸ್ಟ್ ಅಧ್ಯಕ್ಷ ಭಾಸ್ಕರ ಕುಲಾಲ್, ಪಂಜಿಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಸದಸ್ಯ ಪೂವಪ್ಪ ಮೆಂಡನ್, ಧರ್ಮಪ್ಪ ಪೂಜಾರಿ ರಾಮನಗರ, ಚಿದಾನಂದ ಕುಲಾಲ್ ಮತ್ತಿತರರು ಇದ್ದರು.
