ತುಮಕೂರು: ಭಾರೀ ಸುದ್ದಿಯಾಗಿದ್ದ 25 ವರ್ಷದ ಮೇಘನಾಳನ್ನು ಕೈಹಿಡಿದಿದ್ದ ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ 45 ವರ್ಷದ ರೈತ ಶಂಕರಣ್ಣ ಮದ್ವೆಯಾದ 5 ತಿಂಗಳಿಗೇ ದುರಂತ ಅಂತ್ಯ ಕಂಡಿದ್ದಾರೆ. 44 ವರ್ಷಗಳ ಕಾಲ ಮದುವೆಯಾಗದೇ ನೆಮ್ಮದಿಯಿಂದಿದ್ದ ಶಂಕರಣ್ಣ ಸಂಸಾರ ಸಾಗರದಲ್ಲಿ ಈಜಲಾಗದೇ ಮುಳುಗಿಹೋಗಿದ್ದು, ಅವರ ಸಾವಿನ ಕಾರಣ ನಿಜಕ್ಕೂ ಬೇಸರ ಮೂಡಿಸಿದೆ.45-years-old-man-commits-suicide-who-married-25-years-girl-5-months-back

2021ರ ಅಕ್ಟೋಬರ್​ನಲ್ಲಿ ಸಂತೆಮಾವತ್ತೂರು ಗ್ರಾಮದ ಮೇಘನಾ ಮತ್ತು ಅಕ್ಕಿಮರಿಪಾಳ್ಯದ ಶಂಕರಣ್ಣ ಅವರ ಮದುವೆ ನಡೆದಿತ್ತು. ವಯಸ್ಸಿನಲ್ಲಿ ತನಗಿಂತ 20 ವರ್ಷ ದೊಡ್ಡವರಾದ ಶಂಕರಣ್ಣ ಅವರನ್ನ ಮೇಘನಾ ಇಷ್ಟಪಟ್ಟು ಸರಳವಾಗಿ ಮದುವೆ ಆಗಿದ್ದರು. ಈ ಜೋಡಿಯ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿತ್ತು.

ಕಳೆದ ತಿಂಗಳಷ್ಟೇ ಶಂಕರಣ್ಣ-ಮೇಘನಾ ದಂಪತಿ ಊರಿಗೆಲ್ಲ ಊಟ ಹಾಕಿಸಿ ಅದ್ದೂರಿಯಾಗಿ ಪ್ರೇಮಿಗಳ ದಿನ ಆಚರಿಸಿಕೊಂಡಿದ್ದರು. ಇಬ್ಬರೂ ಕಲರ್​ಫುಲ್ ಆಗಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು. ನಾವು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋ ಹಾಗೆ ಕಾಣಿಸಿಕೊಂಡಿದ್ದರು. ಆದರೀಗ ಪತ್ನಿಯನ್ನ ಒಂಟಿ ಮಾಡಿ ಶಂಕರಣ್ಣ ಬದುಕಿನ ಪಯಣ ಮುಗಿಸಿಬಿಟ್ಟಿದ್ದಾರೆ.

ಅಷ್ಟಕ್ಕೂ ಸಾವಿಗೂ ಮುನ್ನ ನಿನ್ನೆ ರಾತ್ರಿ ಏನಾಯ್ತು?

ಚೌಡನಕುಪ್ಪೆ ಗ್ರಾಮ ಸಮೀಪದ ಅಕ್ಕಿಮರಿಪಾಳ್ಯದ ಶಂಕರಣ್ಣ(45) ಮಂಗಳವಾರ ಬೆಳ್ಳಂಬೆಳಗ್ಗೆ ಹೊಲಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರ ಬಂದಿದ್ದರು. ಹೊಲಕ್ಕೆ ಹೋದ ಶಂಕರಣ್ಣ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ರಾತ್ರಿ ಶಂಕರಣ್ಣ ಅವರ ತಾಯಿ ಮತ್ತು ಪತ್ನಿ ನಡುವೆ ಗಲಾಟೆ ನಡೆದಿತ್ತಂತೆ. ಅತ್ತೆ-ಸೊಸೆಯ ಗಲಾಟೆಗೆ ಬೇಸತ್ತ ಶಂಕರಣ್ಣ, ನೀವಿಬ್ಬರೂ ಪ್ರತಿನಿತ್ಯ ಇದೆ ರೀತಿ ಗಲಾಟೆ ಮಾಡಿದ್ರೆ ನಾನು ಸಾಯುವೆ. ನೀವಿಬ್ಬರೂ ಸುಮ್ಮನಿದ್ದರೆ ನನಗೂ ನೆಮ್ಮದಿ ಎಂದಿದ್ದರಂತೆ. ಆದರೂ ಗಲಾಟೆ ನಿಲ್ಲುವ ಲಕ್ಷಣ ಕಂಡಿರಲಿಲ್ಲ.

ಅಷ್ಟಕ್ಕೂ ಗಲಾಟೆ ಯಾವ ವಿಚಾರಕ್ಕೆ ಗೊತ್ತಾ?

ಶಂಕರಣ್ಣನ ಹೆಸರಲ್ಲಿ 2.5 ಎಕರೆ ಜಮೀನಿದೆ. ಇದನ್ನು ಮಾರಾಟ ಮಾಡಿ ಬೆಂಗಳೂರು ಅಥವಾ ಮೈಸೂರಿಗೆ ಹೋಗಿ ನೆಲೆಸೋಣ ಎಂದು ಮದುವೆ ಆದಾಗಿನಿಂದ ಮೇಘನಾ ಒತ್ತಾಯಿಸುತ್ತಿದ್ದಳಂತೆ. ಯಾವುದೇ ಕಾರಣಕ್ಕೂ ಆಸ್ತಿ ಮಾರಾಟ ಮಾಡೋಕೆ ನಾನು ಬಿಡಲ್ಲ ಅಂತ ಶಂಕರಣ್ಣನ ತಾಯಿ ಪಟ್ಟು ಹಿಡಿದಿದ್ದರು. ಇದೇ ವಿಚಾರಕ್ಕೆ ಪದೇಪದೆ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಎಲ್ಲೂ ಹೋಗೋದು ಬೇಡ, ಇಲ್ಲೇ ತಾಯಿ ಜತೆ ಹಳ್ಳಿಯಲ್ಲೇ ಇರೋಣ ಎಂದು ಶಂಕರಣ್ಣ ಹೇಳಿದರೂ ಮೇಘನಾ ಒಪ್ಪಿರಲಿಲ್ಲವಂತೆ. ಇದೇ ಬೇರೆಡೆ ಹೋಗೋಣ ಎಂದು ಗಂಡನನ್ನು ಒತ್ತಾಯ ಮಾಡುತ್ತಿದ್ದಳಂತೆ. ನಿನ್ನೆ ಸಂಜೆಯೂ ಅತ್ತೆ-ಸೊಸೆ ಜಗಳವಾಡಿದ್ದರಂತೆ. ಬೇಸತ್ತ ಶಂಕರಣ್ಣ, ಹೊಲದಲ್ಲಿ ಹಲಸಿನ ಮರಕ್ಕೆ ನೇಣುಬಿಗಿದುಕೊಂಡು ಬದುಕಿನ ಪಯಣ ಮುಗಿಸಿದ್ದಾರೆ.

ಶಂಕರಣ್ಣನ ಶವದ ಬಳಿ ಪತ್ನಿ ಮೇಘನಾ ಮತ್ತು ತಾಯಿಯ ಗೋಳಾಟ ನೋಡಲಾಗ್ತಿಲ್ಲ. ಸ್ವಲ್ಪ ಅರ್ಡ್ಜೆಸ್ಟ್​ ಮಾಡಿಕೊಂಡಿದ್ರೆ ಇಷ್ಟೆಲ್ಲಾ ಆಗ್ತಿರಲಿಲ್ಲ ತಾಯಿ… ನಿಮ್ಮಿಬ್ಬರ ಜಗಳಕ್ಕೆ ಪಾಪ ಶಂಕರಣ್ಣ ಬಲಿಯಾಗಿಬಿಟ್ಟ… ಎಂದು ಗ್ರಾಮಸ್ಥರು ಮರುಗುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *