ಕೈಕಂಬ : ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಜೆಪದವುನಿಂದ ಬಜ್ಪೆಯತ್ತ ಸುಮಾರು ಎರಡು ಕಿಮೀ ರಸ್ತೆಯ ಎರಡೂ ಪಾರ್ಶ್ವದಲ್ಲಿ ರಾಶಿ ಬಿದ್ದಿದ್ದ ಲೋಡ್ಗಟ್ಟೆಲೆ ತ್ಯಾಜ್ಯವನ್ನು ಸ್ಥಳೀಯ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮಸ್ಥರು ಭಾನುವಾರ ಸ್ವಚ್ಛಗೊಳಿಸಲಾಯಿತು.
ಪಂಚಾಯತ್ ಅಧ್ಯಕ್ಷೆ ಅಮಿತಾ ಶೆಟ್ಟಿ ಹಾಗೂ ಪಿಡಿಒ ಉಗ್ಗಪ್ಪ ಮೂಲ್ಯ ಅವರ ನೇತೃತ್ವದಲ್ಲಿ ನಡೆದ ‘ಸ್ವಚ್ಛತಾ ಅಭಿಯಾನ’ದಲ್ಲಿ ಪಡುಪೆರಾರ ಜೈ ಹಿಂದ್ ಫ್ರೆಂಡ್ಸ್ ಕ್ಲಬ್(ರಿ) ಮತ್ತು ಇತರ ಸಂಘಗಳ ೧೦೦ಕ್ಕೂ ಹೆಚ್ಚು ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮಸ್ಥರು, ಮಹಿಳೆಯರು ಮತ್ತು ಮಕ್ಕಳು ಕೈಜೋಡಿಸಿದ್ದರು.
ಸ್ವಚ್ಛತಾ ಅಭಿಯಾನದಲ್ಲಿ ಪಂಚಾಯತ್ ಸದಸ್ಯ ಅರುಣ್ ಕೋಟ್ಯಾನ್, ಕ್ಲಬ್ನ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ಮೋಹನ್, ಅಂಗನವಾಡಿ ಶಿಕ್ಷಕಿಯರು, ಸಿಬ್ಬಂದಿ ಭರತ್ ಮತ್ತಿತರರು ಇದ್ದರು. ಕಾರ್ಯಾಚರಣೆ ವೇಳೆ ರಸ್ತೆ ಬದಿಯಿಂದ ಒಟ್ಟು ೧೦ ಟ್ರಕ್ ಲೋಡ್ ತ್ಯಾಜ್ಯ ಸಂಗ್ರಹಿಸಲಾಯಿತು.
”ಪಡುಪೆರಾರ ಗ್ರಾಮಕ್ಕೊಳಪಟ್ಟಿರುವ ಕಜೆಪದವು, ಕಿನ್ನಿಕಂಬಳ, ಕೈಕಂಬ ಸಹಿತ ಇತರೆಡೆ ರಸ್ತೆ ಬದಿಗಳಲ್ಲಿ ನಿರಂತರ ತ್ಯಾಜ್ಯ ಎಸೆಯಲಾಗುತ್ತಿದ್ದು, ದುರ್ನಾತ ಬೀರುತ್ತಿದೆ. ಇಲ್ಲಿಗೆ ಪಿಡಿಒ ಆಗಿ ಬಂದ ಬಳಿಕ ರಸ್ತೆ ಬದಿಯಲ್ಲಿ ಸ್ವಚ್ಚತೆಗಾಗಿ ಆದ್ಯತೆ ನೀಡಿದ್ದೇನೆ. ಕಾರ್ಯಾಚರಣೆ ವೇಳೆ ಒಬ್ಬಿಬ್ಬರ ಮೇಲೆ ದಂಡವನ್ನೂ ಹೇರಿದ್ದೇನೆ. ಗ್ರಾಮ ಸ್ವಚ್ಛವಾಗಿರಬೇಕೆಂಬ ಪರಿಕಲ್ಪನೆಯಿಂದ ಈ ಕಾರ್ಯ ಕೈಗೊಂಡಿದ್ದೇನೆ. ಇದಕ್ಕೆ ಗ್ರಾಮಸ್ಥರ ಸಹಕಾರ ಸಿಕ್ಕಿದೆ. ರಜೆಯ ದಿನವೂ ಸ್ವಚ್ಚತಾ ಅಭಿಯಾನ ಮುಂದುವರಿಸಿದ್ದೇವೆ” ಎಂದು ಪಿಡಿಒ ಉಗ್ಗಪ್ಪ ಮೂಲ್ಯ ತಿಳಿಸಿದರು.

