ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಸೇತುವೆ ಮೇಲೆ ಬೈಕ್ ಮತ್ತು ಮೊಬೈಲ್ ಇಟ್ಟು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.18ರಂದು ಮಂಗಳವಾರ ಮಧ್ಯರಾತ್ರಿ ನಡೆದಿದೆ. ಸಜಿಪಮುನ್ನೂರು ಗ್ರಾಮದ ಕಾರಾಜೆ ನಿವಾಸಿ ಜಲೀಲ್ ಯಾನೆ ಕನ್ವರ್ಷನ್ ಜಲೀಲ್ ( ೫೫) ಎಂಬವರು ಮೃತರು. ಇಲ್ಲಿನ ಪುರಸಭೆ ಮತ್ತು ಬೂಡ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿಕೊಂಡಿದ್ದ ಇವರು ಕನ್ವರ್ಷನ್ ಜಲೀಲ್ ಎಂದೇ ಗುರುತಿಸಿಕೊಂಡಿದ್ದರು.
ಇವರು ಮಂಗಳವಾರ ರಾತ್ರಿ ಸುಮಾರು ೧೧ ಗಂಟೆಗೆ ಪಾಣೆಮಂಗಳೂರು ಸಮೀಪದ ಗೂಡಿನಬಳಿ ನೇತ್ರಾವತಿ ಸೇತುವೆಗೆ ಬಂದು ಮನೆಗೆ ಕರೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬುಧವಾರ ಬೆಳಿಗ್ಗೆ ಸ್ಥಳೀಯ ಈಜುಗಾರ ಸತ್ತಾರ್ ಮತ್ತಿತರರ ತಂಡ ನದಿಯಲ್ಲಿ ಮೃತದೇಹ ಪತ್ತೆಹಚ್ಚಿ ಮೇಲೆತ್ತಿದ್ದಾರೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
