ಮೂಡುಬಿದಿರೆ: ಮರದ ಹಲಗೆಯ ಮೇಲೆ 6,666 ಕಬ್ಬಿಣದ ಮೊಳೆಗಳನ್ನು ಜೋಡಿಸಿ ಐದು ಗಂಟೆಗಳಲ್ಲಿ ಗಣಪತಿಯ ಕಲಾಕೃತಿಯನ್ನು ಮೂಡಿಸಿರುವ ಆಳ್ವಾಸ್ ಬಿವಿಎ ಅಂತಿಮ ವರ್ಷದ ವಿದ್ಯಾರ್ಥಿ ತಿಲಕ್ ಕುಲಾಲ್ ಅವರು ಏಷ್ಯಾ ಬುಕ್ ಆಫ್ ರೆಕಾರ್ಡ್, ವರ್ಲ್ಡ್ ರೆಕಾರ್ಡ್ ಆಫ್ ಇಂಡಿಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ ಹೀಗೆ ಮೂರು ದಾಖಲೆಗಳನ್ನು ಮಾಡಿದ್ದಾರೆ. ಅವರಿಗೆ ಈ `ಮೊಳೆ ಕಲೆ’ಯಲ್ಲಿ ಸಹಕಾರಿಯಾಗಿರುವ ಮೂಡುಬಿದಿರೆ ವಿದ್ಯಾಗಿರಿಯ ಅಕ್ಷಿತ್ ಅವರಿಗೂ ಈ `ದಾಖಲೆ ಪ್ರಮಾಣ ಪತ್ರಗಳು’ ಲಭಿಸಿವೆ.
ಸೆಪ್ಟಂಬರ್ ತಿಂಗಳಲ್ಲಿ ಆಳ್ವಾಸ್ ಕಾಲೇಜಿನಲ್ಲಿ ಮೂಡುಬಿದಿರೆಯ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ , ವಕೀಲರ ಸಂಘದ ಸ್ಥಾಪಕಾಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಹಾಗೂ ನೋಟರಿ ವಕೀಲ ಹರೀಶ್ ಉಪಸ್ಥಿತಿಯಲ್ಲಿ ಕಲಾಕೃತಿಯ ರಚನೆಯ ಪ್ರಾತ್ಯಕ್ಷಿಕೆಯ ವೀಡಿಯೋ ದಾಖಲೀಕರಣ ನಡೆದಿತ್ತು. ಈ ದಾಖಲೆಗಳನ್ನು ಪರಿಶೀಲಿಸಿದ ಮೂರು ಸಂಸ್ಥೆಗಳು ಇದೀಗ ತಿಲಕ್ ಕುಲಾಲ್ ಮತ್ತು ಅಕ್ಷಿತ್ ಅವರಿಗೆ `ದಾಖಲೆ ಪ್ರಮಾಣ ಪತ್ರ’ ರವಾನಿಸಿವೆ.
