ಬ್ರಹ್ಮರಕೂಟ್ಲು: ನಾಡ ಗೀತೆಯಲ್ಲಿ ಬರುವ ಸರ್ವ ಜನಾಂಗವೂ ಶಾಂತಿಯ ತೋಟವಾಗಿ ಎಲ್ಲೆಲ್ಲೂ ಹರುಷ ಹರಡುವಂತೆ ಆಗಲಿ ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಉದಯಕುಮಾರ್ ಜ್ಯೋತಿಗುಡ್ಡೆ ಸದಾಶಯವನ್ನು ವ್ಯಕ್ತಪಡಿಸಿ ಮಾತನಾಡಿದ ಅವರು ರಾಜ್ಯೋತ್ಸವದ ಪ್ರಯುಕ್ತ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ತಂಡಕ್ಕೆ ಬಹುಮಾನ ಹಂಚುವ ಸಂದರ್ಭ ನಾಡ ಗೀತೆ ಎಂಬುದು ಕೇವಲ ಬಾಯಿಪಾಠ ಮಾಡುವ ಗೀತೆಯಲ್ಲ. ದಿನ ನಿತ್ಯ ನಾವು ಹೇಗೆ ಬದುಕಬೇಕೆಂಬುದನ್ನು ಸೂಚ್ಯವಾಗಿ ಬೋಧಿಸುತ್ತದೆ.ಇದನ್ನು ಅರಿತು ಆಚರಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಶಾಲಾ ಶಿಕ್ಷಕರು ಹಾಗೂ ಮಕ್ಕಳು ಜೊತೆಗೂಡಿ ಕರ್ನಾಟಕದ ಪುಷ್ಷಾಲಂಕೃತ ನಕಾಶೆಯನ್ನು ರಚಿಸಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರವಿ ಜೈನ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಚಿತ್ರಾಕ್ಷಿ ಜಾರಂದಗುಡ್ಡೆ, ಸುನಿತಾ ಕಂಜೆತೂರು, ಹೇಮಾವತಿ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಫ್ಲೋರಿನ್ ರೆಬೆಲ್ಲೊ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಫ್ಲೇವಿ ಪ್ರೀತಿ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸನಿಹದಲ್ಲಿ ಬೀಡುಬಿಟ್ಟಿರುವ ಕೆ.ಎಸ್.ಆರ್. ಪಿ ಯವರು ಸಿಹಿ ಹಂಚಿ ಸಂಭ್ರಮಿಸಿದರು.
ಸಬಾ ಕಾರ್ಯಕ್ರಮದ ಬಳಿಕ ಶಾಲಾ ಸ್ವಚ್ಛತಾ, ತರಗತಿ ಸೌಂದರ್ಯೀಕರಣ ಕಾರ್ಯಕ್ರಮದಲ್ಲಿ ಪೋಷಕರು ಶಿಕ್ಷಕರು ಹಾಗೂ ಮಕ್ಕಳು ಮತ್ತಿತರರು ಭಾಗವಹಿಸಿದರು.

