ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಅವರು ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ೨೦೧೪ರಲ್ಲಿ ಪಾಣೆಮಂಗಳೂರಿನಿಂದ ಪ್ರತ್ಯೇಕಗೊಂಡ ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಇದೇ ೩೧ರಂದು ಬೆಳಿಗ್ಗೆ ೯ಗಂಟೆಗೆ ಕಲ್ಲಡ್ಕ ಶ್ರೀರಾಮ ಮಂದಿರ ಸಭಾಂಗಣದಲ್ಲಿ ನಡೆಯಲಿದ್ದು, ಕಳೆದ ಸಾಲಿನಲ್ಲಿ ಸಂಘವು ರೂ ೩೨೧ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ೧.೬ ಕೋಟಿ ಮೊತ್ತದ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಹೇಳಿದ್ದಾರೆ.
ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಸಾಲಿನಲ್ಲಿ ಕೃಷಿಕರಿಗೆ ಒಟ್ಟು ರೂ ೪೩.೬ ಕೋಟಿ ಮೊತ್ತದ ಕೃಷಿ ಮತ್ತು ಕೃಷಿಯೇತರ ಸಾಲ ವಿತರಿಸಲಾಗಿದೆ. ಇಲ್ಲಿನ ಗೋಳ್ತಮಜಲು, ಬಾಳ್ತಿಲ, ಅಮ್ಟೂರು, ವೀರಕಂಭ, ಬೋಳಂತೂರು ಐದು ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟ ಸಂಘವು ಬೋಳಂತೂರು ಸ್ವಂತ ನಿವೇಶನ ಮತ್ತು ಕಟ್ಟಡ ನಿರ್ಮಿಸಲು ಮುಂದಾಗಿದೆ. ಪಡಿತರ ಸಾಮಾಗ್ರಿ ವಿತರಣೆ ಮತ್ತು ಕ್ಯಾಂಪ್ಕೋ ಸಹಕಾರದಲ್ಲಿ ಅಡಿಕೆ ಖರೀದಿಯೂ ನಡೆಯುತ್ತಿದೆ ಎಂದರು.
ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಅರ್ಹ ಸದಸ್ಯರಿಗೆ ವೈದ್ಯಕೀಯ ಶಸ್ತ್ರಚಿಕಿತ್ಸೆಗೆ ನೆರವು, ಬಡ್ಡಿರಹಿತ ಸಾಲ ನೀಡಲಾಗುತ್ತಿದ್ದು, ಕಲ್ಲಡ್ಕ ಪ್ರಧಾನ ಕಚೇರಿಗೆ ನೂತನ ಕಟ್ಟಡ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಸುಧಾಕರ ರೈ, ನಿರ್ದೇಶಕರಾದ ಗಿರಿಯಪ್ಪ ಗೌಡ, ವೆಂಕಟ್ರಾಯ ಪ್ರಭು, ಚಂದ್ರಶೇಖರ ಟೈಲರ್, ನೋಣಯ್ಯ ಎಂ.ಆರ್., ಸಿಇಒ ಸುರೇಶ್ ಕೆ. ಇದ್ದರು.
