ಕೈಕಂಬ : ಶಿಕ್ಷಣ ಇಲಾಖೆಯ ಆದೇಶದನ್ವಯ ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣಾಧಿಕಾರಿಯವರ(ಡಿಡಿಪಿಐ) ಸೂಚನೆಯಂತೆ ಗುರುಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಶಿಕ್ಷಣಾಸಕ್ತರ ಸಭೆಯಲ್ಲಿ ನಡುಗುಡ್ಡೆ ದಕಜಿಪ ಕಿರಿಯ ಪ್ರಾಥಮಿಕ ಶಾಲೆಯನ್ನು ಗುರುಪುರ ಸರ್ಕಾರಿ ಪ್ರೌಢಶಾಲೆಗೆ ಸ್ಥಳಾಂತರಿಸುವ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯಿತು.
ಶಿಕ್ಷಣ ಇಲಾಖೆಯ ಶಿಫಾರಸಿನಂತೆ ನವಂಬರ್ ಒಂದರಿಂದಲೇ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರೌಢಶಾಲೆಯ ಖಾಲಿ ಕೊಠಡಿಗಳಲ್ಲಿ 1ರಿಂದ 5ನೇ ತರಗತಿ ಆರಂಭಿಸುವ ನಿಟ್ಟಿನಲ್ಲಿ ಸುಮಾರು 15 ಮಕ್ಕಳ ಪೋಷಕರ ಒಪ್ಪಿಗೆ ಪತ್ರ ಸಂಗ್ರಹಿಸಿ ಡಿಡಿಪಿಐಯವರಿಗೆ ಕಳುಹಿಸಿ ಕೊಡಲು ತೀರ್ಮಾನಿಸಲಾಯಿತು.
ಅಂಗನವಾಡಿ/ಆಶಾ ಕಾರ್ಯಕರ್ತೆಯರ ನೆರವು : ಮೊದಲ ಹಂತದಲ್ಲಿ ಕಿರಿಯ ಶಾಲೆಯ ಒಂದು ಮತ್ತು ಐದನೇ ತರಗತಿಗೆ ಮಕ್ಕಳ ಪ್ರವೇಶಾತಿ ಪಡೆಯುವ ಉದ್ದೇಶಕ್ಕಾಗಿ ಇಂದಿನಿಂದಲೇ ಮನೆಮನೆಗಳಿಗೆ ತೆರಳಿ ನೀಡಿ ಮಕ್ಕಳ ಪೋಷಕರೊಂದಿಗೆ ಚರ್ಚಿಸಿ ಮನವೊಲಿಸಲು ಹಾಗೂ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚಿಸುವ ಉದ್ದೇಶಕ್ಕಾಗಿ ಕಿರಿಯ ಶಾಲಾ ಶಿಕ್ಷಕಿ ಸುಲತಾ, ಆಯಾ ವಾರ್ಡಿನ ಪಂಚಾಯತ್ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ತಂಡ ರಚಿಸಲು ನಿರ್ಧರಿಸಲಾಯಿತು.
ಬ್ಯಾನರ್ ಅಳವಡಿಕೆ : ಸರ್ಕಾರದ ಉಚಿತ ಶಿಕ್ಷಣ ನೀತಿಯಡಿ ಇಲ್ಲಿನ ಕಿರಿಯ ಶಾಲೆ ಪುನರಾರಂಭವಾಗುವ ಬಗ್ಗೆ ಆಯಕಟ್ಟಿನ ಪ್ರದೇಶಗಳಲ್ಲಿ ಬ್ಯಾನರ್ ಅಳವಡಿಸಿ ಪ್ರಚಾರ ನಡೆಸಲು ತೀರ್ಮಾನಿಸಲಾಯಿತು. ಇದೇ ವೇಳೆ ತರಗತಿ ಕೊಠಡಿಗಳಿಗೆ ಬೆಂಚು, ಕುರ್ಚಿಗಳಿಗಾಗಿ ದಾನಿಗಳ ನೆರವು ಪಡೆಯಲು ಹಾಗೂ ಹಳೆಯ ಶಾಲೆಯಲ್ಲಿರುವ ಪೀಠೋಪಕರಣ ಬಳಕೆಗೆ ನಿರ್ಧರಿಸಲಾಯಿತು.
ಪ್ರೌಢ ಶಾಲಾಭಿವೃದ್ಧಿ ಸಮತಿ ಅಧ್ಯಕ್ಷ ಸತೀಶ್ ಕಾವ, ಸರ್ಕಾರಿ ಪಿಯು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಶವಂತ ಆಳ್ವ, ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಸದಸ್ಯರಾದ ಜಿ ಎಂ ಉದಯ ಭಟ್, ಸಚಿನ್ ಅಡಪ, ರಾಜೇಶ್ ಸುವರ್ಣ, ಬಾಲಕೃಷ್ಣ ಪೂಜಾರಿ, ಬಿಜೆಪಿ ಪ್ರಮುಖರಾದ ಶ್ರೀಕರ ಶೆಟ್ಟಿ, ಸೋಮಯ್ಯ ಬೆಳ್ಳೂರು, ವಿಹಿಂಪ ಗುರುಪುರ ಪ್ರಖಂಡ ಅಧ್ಯಕ್ಷ ವಿಷ್ಣು ಕಾಮತ್, ವಿನಯ್, ಲಕ್ಷ್ಮಣ್ ಶೆಟ್ಟಿ ಸೂಕ್ತ ಸಲಹೆ ನೀಡಿದರು.
ಕಾಲೇಜು ಪ್ರಾಂಶುಪಾಲ ಚಂದ್ರಶೇಖರ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೂಪಾ ಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
