ಕೈಕಂಬ :ಧೈರ್ಯ, ಬುದ್ಧಿವಂತಿಕೆ ಮತ್ತು ತಿಳುವಳಿಕೆಯ ಜೊತೆಗೆ ಪ್ರತಿಯೊಂದು ವಿಷಯದಲ್ಲೂ ಮಹಿಳೆ ಇಂದು ಜಾಗೃತಗೊಳ್ಳಬೇಕು. ಸ-ರಕ್ಷಣೆಯಲ್ಲಿ ಆಕೆ ತನಗರ ತಾನೇ ಮಾದರಿ ಮಹಿಳೆಯಾಗಬೇಕು. ಹೆಣ್ಣು-ಗಂಡು ಬೇಧರಹಿತ ಸಮಾಜ ನಿರ್ಮಾಣವಾಗಬೇಕು. ಆಗಲೇ ಸಮಾನತೆಗೆ ನಿಜವಾದ ಅರ್ಥ ಬರುವುದು ಎಂದು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಶ್ವೇತಾ ರಸ್ಕಿನ್ಹಾ ತಿಳಿಸಿದರು.
ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇದರ ‘ಸಾಮಾಜಿಕ ಕಳಕಳಿಯ ಕೇಂದ್ರ’, ಬಜ್ಪೆ ಪೊಲೀಸ್ ಠಾಣೆ ಮತ್ತು ಕಂದಾವರ ಗ್ರಾಮ ಪಂಚಾಯತ್ ಜಂಟಿಯಾಗಿ ಕಂದಾವರ ಪಂಚಾಯತ್ ಸಭಾಗೃಹದಲ್ಲಿ ಮಂಗಳವಾರ ಆಯೋಜಿಸಿದ `ಮಹಿಳೆಯ ಸುರಕ್ಷತೆ ಮತ್ತು ಹಕ್ಕುಗಳು’ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಬಜ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಪೂವಪ್ಪ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಹೆದರಿದರೆ ಹೆದರಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಮೊತ್ತಮೊದಲಾಗಿ ಮಹಿಳೆ ಧೈರ್ಯವಂತಳಾಗಬೇಕು. ಅಪರಿಚಿತರ ಬಗ್ಗೆ ಎಚ್ಚರ ವಹಿಸಿ ಎಂದರು.
ಕಂದಾವರ ಪಂಚಾಯತ್ ಅಧ್ಯಕ್ಷ ಉಮೇಶ್ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಯಶವಂತ ಬೆಳ್ಚಡ ಸ್ವಾಗತಿಸಿದರು. ಕಾರ್ಯದರ್ಶಿ ಜಲಜಾಕ್ಷಿ, ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಸಂತ ಅಲೋಶಿಯಸ್ ಕಾಲೇಜಿನ ‘ಸಾಮಾಜಿಕ ಕಳಕಳಿಯ ಕೇಂದ್ರ’ದ ಸಂಯೋಜಕಿ ಫಿಲೋಮಿನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಎಂಎಸ್ಡಬ್ಲ್ಯೂ ವಿಭಾಗದ ಗೋಪಿಕಾ ಧನ್ಯವಾದಗೈದರು.
