ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಕೈಕಂಬದ ರೋಸಾ ಮಿಸ್ತಿಕಾ ಪ್ರೌಢ ಶಾಲಾ ಕನ್ನಡ ಮಾಧ್ಯಮ ವಿಭಾಗದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಒದಗಿಸಿದ ಪಠ್ಯ ಪುಸ್ತಕಗಳನ್ನು ಮಂಗಳವಾರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಅಧ್ಯಕ್ಷತೆಯಲ್ಲಿ ವಿತರಿಸಲಾಯಿತು.
ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಮಾತನಾಡಿ, ಹತ್ತಿಪ್ಪತ್ತು ವರ್ಷಗಳ ಹಿಂದೆ ಶಿಕ್ಷಣ ಕಷ್ಟವಾಗಿತ್ತು. ಈಗ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ಸವಲತ್ತು ನೀಡುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಪ್ರಕಟಿಸಿರುವ ಸವಲತ್ತುಗಳು ವಿದ್ಯಾರ್ಥಿಗಳಿಂದ ಸದುಪಯೋಗವಾಗಬೇಕು ಮತ್ತು ಕಲಿತ ಶಾಲೆ, ಸಮಾಜಕ್ಕೆ ಉತ್ತಮ ಹೆಸರು ತಂದುಕೊಡಬೇಕು ಎಂದರು.ಹತ್ತನೇ ತರಗತಿಯ ಒಟ್ಟು ೧೫೩ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.
ಸಭೆಯಲ್ಲಿ ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಐಡಾ ಡಿ’ಸೋಜ, ತಾಪಂ ನಿಕಟಪೂರ್ವ ಸದಸ್ಯ ಸುನಿಲ್ ಕುಮಾರ್, ಶಿಕ್ಷಕಿಯರಾದ ಸಿಲ್ವಿಯಾ, ಆಂಜಲಿನ್, ಆಶ್ರಿತಾ ಇದ್ದರು. ಶಿಕ್ಷಕಿ ಸಬಿನಾ ಕ್ರಾಸ್ತಾ ಸ್ವಾಗತಿಸಿ, ಪ್ರಸ್ತಾವಿಸಿದರು. ದೈಹಿಕ ಶಿಕ್ಷಕ ಲ್ಯಾನ್ಸಿ ಸಿಕ್ವೇರ ನಿರೂಪಿಸಿದರೆ, ಶಿಕ್ಷಕ ಪ್ರವೀಣ್ ಕುಟಿನ್ಹೋ ವಂದಿಸಿದರು.
