ಮೂಡುಬಿದಿರೆ: ಲವ್ ಜಿಹಾದ್ ಹಾಗೂ ಉಗ್ರಗಾಮಿ ಕೃತ್ಯಗಳ ಬಗ್ಗೆ ಉನ್ನತಮಟ್ಟದ ತನಿಖೆಗೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಘಟಕದಿಂದ ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ಅಧ್ಯಕ್ಷ ಕಿಶೋರ್ ಕುಮಾರ್ ಪ್ರತಿಭಟನೆಯಲ್ಲಿ ಮಾತನಾಡಿ, ಮಂಗಳೂರು, ಕೊಡಗು, ಕೇರಳವನ್ನು ಕೇಂದ್ರೀಕರಿಸಿ ಮತಾಂತರ, ಲವ್ ಜಿಹಾದಿ, ಉಗ್ರವಾದಿ ಚಟುವಟಿಕೆಗಳನ್ನು ನಡೆಸುವ ಬಹುದೊಡ್ಡ ಷಡ್ಯಂತ್ರಗಳು ನಡೆಯುತ್ತಿವೆ. ಇದನ್ನು ತಡೆಯಲು ರಾಷ್ಟ್ರೀಯ ತನಿಖಾ ದಳ ಹಾಗೂ ಭಾರತೀಯ ಸೇನೆಯ ಪಡೆಯೊಂದು ಮಂಗಳೂರಿನಲ್ಲಿ ಸ್ಥಾಪಿಸುವಂತೆ ಎಂದು ಆಗ್ರಹಿಸಿದರು.
ಕೇರಳ ಮತ್ತು ಭಟ್ಕಳದ ನಂಟು ಹೊಂದಿರುವ ಭಯೋತ್ಪಾದನೆ ಚಟುವಟಿಕೆಗಳ ಕುರಿತು ಸಮಗ್ರ ತನಿಖೆಯಾಗಬೇಕು. ಕೋಮು ಹಿಂಸಾಚಾರ ಮತ್ತು ಉಗ್ರಗಾಮಿ ಚಟುವಟಿಕೆಗಳಿಗೆ ಆರ್ಥಿಕ, ನೈತಿಕ ಬೆಂಬಲ ನೀಡುತ್ತಿರುವ ಸಂಸ್ಥೆಗಳು, ರಾಜಕೀಯ ಸಂಘಟನೆಗಳ ಕುರಿತು ತನಿಖೆಯಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಲವ್ ಜಿಹಾದ್ ಚಟುವಟಿಕೆಗಳನ್ನು ಮಟ್ಟಹಾಕಲು ಸರ್ಕಾರ ಉತ್ತರ ಪ್ರದೇಶ ಮಾದರಿಯ ಕಾನೂನು ಜಾರಿ ಮಾಡಬೇಕು. ಕೋಮು ಸೂಕ್ಷö್ಮ ಪ್ರದೇಶಗಳಲ್ಲಿ ವಾಸವಿರುವ ಹಿಂದೂ ದರ್ಮೀಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಮಾದಕದ್ರವ್ಯದಂತಹ ವಿಷ ಜಾಲಗಳನ್ನು ಕಿತ್ತೊಗೆಯಲು ರಾಜ್ಯ ಸರ್ಕಾರ ವಿಶೇಷ ಕಾನೂನು ರೂಪಿಸುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.
ಮೂಡುಬಿದಿರೆ ತಹಸೀಲ್ದಾರ್ ಪುಟ್ಟರಾಜು ಅವರಿಗೆ ಮನವಿ ಸಲ್ಲಿಸಲಾಯಿತು. ಹಿಂ.ಜಾ.ವೇ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಮಟ್ಟಿ, ತಾಲೂಕು ಘಟಕದ ಅಧ್ಯಕ್ಷ ಸಮಿತ್ರಾಜ್ ಧರೆಗುಡ್ಡೆ, ಪ್ರಧಾನ ಕಾರ್ಯದರ್ಶಿ ಸಂದೀಪ್ ಸುವರ್ಣ, ಉಪಾಧ್ಯಕ್ಷ ಸುನೀಲ್ ಇರುವೈಲು, ಕಾರ್ಯದರ್ಶಿ ಸಂದೀಪ್ ಹೆಗ್ಡೆ, ಪ್ರಚಾರ ಪ್ರಮುಖ್ ರಾಜೇಶ್ ಕೋಟ್ಯಾನ್, ಮುಖಂಡರಾದ ಕೆ.ಪಿ ಜಗದೀಶ್ ಅಧಿಕಾರಿ, ಕೃಷ್ಣರಾಜ ಹೆಗ್ಡೆ, ಪ್ರಮುಖರಾದ ಹರಿಶ್ಚಂದ್ರ ಕೆ.ಸಿ, ನರೇಶ್ ಶೆಟ್ಟಿ, ನಾಗೇಶ್, ಯತೀಶ್ ಮತ್ತಿತರರು ಉಪಸ್ಥಿತರಿದ್ದರು.
