ಮೂಡುಬಿದಿರೆ: ಕಂಬಳ ಕ್ಷೇತ್ರದಲ್ಲಿ ಅತೀ ವೇಗದ ಓಟಗಾರನೆಂದು ಹೆಗ್ಗಳಿಕೆ ಗಳಿಸಿರುವ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರನ್ನು ದೂರವಾಣಿ ಕರೆಯ ಮುಖಾಂತರ ನಿಂದಿಸಿರುವ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಂಬಳ ಕೋಣಗಳ ಯಜಮಾನರು ಹಾಗೂ ಶ್ರೀನಿವಾಸ ಗೌಡ ಅವರ ಅಭಿಮಾನಿಗಳು ಮೂಡುಬಿದಿರೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ. ಆರೋಪಿಯ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಶಾಸಕ ಉಮಾನಾಥ ಕೋಟ್ಯಾನ್ ಸೂಚನೆ ನೀಡಿದ್ದಾರೆ.
ಗುರುವಾರ ಕಂಬಳದ ಕುರಿತು ಪ್ರಶಾಂತ್ ಎಂಬಾತನ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ, ಆತ ತನ್ನನ್ನು, ತನ್ನ ಕುಟುಂಬದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಶ್ರೀನಿವಾಸ ಗೌಡ ಅವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಧಕ ಓಟಗಾರನ ಅವಹೇಳನ ಮಾಡಿರುವುದನ್ನು ಕಂಬಳ ಕ್ಷೇತ್ರದ ಪ್ರಮುಖರು, ಕಂಬಳಾಭಿಮಾನಿಗಳು ಖಂಡಿಸಿದ್ದಾರೆ.
ಕಂಬಳ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಶ್ರೀನಿವಾಸ ಗೌಡ, ಅವರ ಕುಟುಂಬದವರನ್ನು ಯುವಕನೋರ್ವ ಅಪಮಾನ ಮಾಡಿರುವುದು ಕೇವಲ ಅವರಿಗೆ ಮಾಡಿರುವ ಅಪಮಾನವಲ್ಲ. ಇದು ಕಂಬಳ ಕ್ಷೇತ್ರಕ್ಕೆ, ತುಳುನಾಡಿಗೆ ಮಾಡಿರುವ ಅಪಮಾನ. ತಪಿತಸ್ಥನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿಕೆ ನೀಡಿದ್ದಾರೆ.
