ಕೈಕಂಬ : ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್(ರಿ) ಇದರ ಆಶ್ರಯದಲ್ಲಿ ಎ. ೨೨ ಗುರುವಾರದಿಂದ ೨೪ ರಂದು ಶನಿವಾರದವರೆಗೆ ನಡೆಯಲಿರುವ ಪುತ್ತೂರಿನ ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನದಲ್ಲಿ ನಿರ್ಮಿಸಲಾಗಿರುವ ನಾಗಬೆರ್ಮೆರ ಗುಡಿ, ನಾಗಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿ ಹಾಗೂ ದೇಯಿ ಬೈದೆದಿ ಸಾನಿಧ್ಯ (ಸಮಾಧಿ) ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ 18 ರಂದು ಭಾನುವಾರ ಗುರುಪುರ ಕೈಕಂಬದ ಖಾಸಗಿ ಸಭಾಗೃಹದಲ್ಲಿ ಬಿಲ್ಲವ ಸಮಾಜ ಬಾಂಧವರಿಂದ ಪೂರ್ವಭಾವಿ ಸಭೆ ನಡೆಯಿತು.
ಟ್ರಸ್ಟ್ ನ ಪ್ರವರ್ತಕ ಚರಣ್ ಕೆ ಮುಗ್ಗಗುತ್ತು ಪಡುಮಲೆಯಲ್ಲಿ ಈವರೆಗೆ ಆಗಿರವ ಅಭಿವೃದ್ಧಿ ಕೆಲಸಗಳು ಮತ್ತು ಸ್ಥಳದ ಮಹತ್ವದ ಬಗ್ಗೆ ಮಾಹಿತಿ ನೀಡಿ, ಕೊರೋನಾ ಮಹಾಮಾರಿ ಸಂಕಷ್ಟವಿರುವುದರಿಂದ ಈ ಬಾರಿ ಅಲ್ಲಿಗೆ ಹಸಿರು ಹೊರೆಕಾಣಿಕೆ ಸಂಗ್ರಹಿಸುವುದು ಬೇಡ. ಮುಂದಿನ ಎರಡು ವರ್ಷದಲ್ಲಿ ಅಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬಹುದು ಎಂದರು.
ಟ್ರಸ್ಟ್ ನ ಉಪಾಧ್ಯಕ್ಷ ಪದ್ಮನಾಭ ಕೋಟ್ಯಾನ್ ಮಾತನಾಡಿ, ಎ. ೨೪ರಂದು ಸ್ಥಳೀಯ ಗುರುಪುರ, ಕಂದಾವರ, ಎಡಪದವು, ತೆಂಕುಳಿಪಾಡಿ, ಬಡಗುಳಿಪಾಡಿ, ಗಂಜಿಮಠ, ಪಡುಪೆರಾರ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಂದ ಪಡುಮಲೆಗೆ ತೆರಳಲು ಬಿಲ್ಲವ ಬಂಧುಗಳು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ತಾ.ಪಂ. ಸದಸ್ಯ ಜಿ ಸುನಿಲ್ ಸ್ವಾಗತಿಸಿದರು. ಸಭೆಯಲ್ಲಿ ಬಿಲ್ಲವ ಮುಖಂಡರಾದ ಐತಪ್ಪ ಪೂಜಾರಿ ವಾಮಂಜೂರು, ವೀರಣ್ಣ ಪೂಜಾರಿ ವಾಮಂಜೂರು, ಬಾಲಕೃಷ್ಣ ಪೂಜಾರಿ ವಾಮಂಜೂರು, ಗುರುಪುರ ಗ್ರಾಪಂ ಸದಸ್ಯ ಸುನಿಲ್ ಕುಮಾರ್, ಆದ್ಯಪಾಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೋಮಪ್ಪ ಪೂಜಾರಿ, ಕುಪ್ಪೆಪದವು ನಾರಾಯಣ ಗುರುಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಹಿಂದೂ ಮುಖಂಡ ಹರೀಶ್ ಮಟ್ಟಿ ವಂದಿಸಿದರು.
