ಮೂಡುಬಿದಿರೆ: ಅಶ್ವತ್ಥಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಸಮೀಪದ ಬೀದಿಯಲ್ಲಿ ಮೈಸೂರಿನಿಂದ ಬಂದ ರಘುಲೀಲಾ ಸ್ಕೂಲ್ ಆಫ್ ಮ್ಯೂಸಿಕ್ನ ತಂಡದವರು ನಡೆಸಿಕೊಟ್ಟ ನಗರ ಸಂಕೀರ್ತನೆ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಿರುತೆರೆ ನಟಿ ಅಂಕಿತಾ ಅಮರ್ ಸಂಕೀರ್ತನೆಯಲ್ಲಿ ಮುಂಚೂಣಿಯಲ್ಲಿದ್ದು, ಗಾಯಕಿಯರ ಸುಶ್ರಾವ್ಯ ಕಂಠ, ಇಡೀ ತಂಡದ ಶಿಸ್ತು ಜನಾಕರ್ಷಣೆಯನ್ನು ಪಡೆಯಿತು. ನಗರ ಸಂಕೀರ್ತನೆ ಪರಂಪರೆಯನ್ನು ಸೊಗಸಾಗಿ ಪ್ರಸ್ತುತಪಡಿಸಿದ ಇಡೀ ತಂಡದ ಪ್ರದರ್ಶನ ಸಾಮಾಜಿಕ ಜಾಲತಾಣ, ಅದರಲ್ಲೂ ಟಿಟ್ವರ್ ನಲ್ಲಿ ಅನ್ಯಭಾಷಿಗರನ್ನು ಆಕರ್ಷಿಸಿದೆ.
ಮೂಡುಬಿದಿರೆ ಅಶ್ವತ್ಥಪುರದ ಕಲಾವತಿಯವರು ಇರುವ ಮೈಸೂರಿನ ರಘುಲೀಲಾ ಸುಗಮ ಸಂಗೀತ ಶಾಲೆಯಲ್ಲಿ, ಅವರ ಒತ್ತಾಯದ ಮೇರೆಗೆ ಮುಖ್ಯಸ್ಥೆ ಸುನೀತಾ ಚಂದ್ರಕುಮಾರ್ ನೇತೃತ್ವದ ತಂಡದವರು ಅಶ್ವತ್ಥಪುರದಲ್ಲಿ ನಗರ ಸಂಕೀರ್ತನೆ ನಡೆಸಿಕೊಟ್ಟಿತು.
ಮೈಸೂರಿನಲ್ಲಿ ಕಳೆದ ಮೂರು ವರ್ಷಗಳಿಂದ ಇಂಥ ಸಂಕೀರ್ತನೆ ನಡೆಸಲಾಗುತ್ತಿದೆ. ಈ ಮೊದಲು ಶೃಂಗೇರಿ, ಉಡುಪಿಯ ಪಲಿಮಾರು ಮಠದ ಪರ್ಯಾಯೋತ್ಸವ ವೇಳೆಯೂ ನಡೆಸಲಾಗಿತ್ತು.
