ಮೂಡುಬಿದಿರೆ: ತಾಲೂಕಿನ ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಸಂಪಿಗೆ ಎಂಬಲ್ಲಿ ಕಾರ್ಯಚರಿಸುತ್ತಿರುವ ಪೆಟ್ರೋಲ್ ಪಂಪ್ನಿಂದ ತೈಲ ಸೋರಿಕೆ ಉಂಟಾಗಿ ಸುತ್ತ-ಮುತ್ತಲಿನ ಬಾವಿಗಳ ನೀರು ಕಲುಷಿತಗೊಂಡಿದ್ದು, ಸ್ಥಳೀಯರು ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ಎದುರಾಗಿರುವುದರಿಂದ ಈ ಬಗ್ಗೆ ಸುಧಾಕರ ಎಂಬವರು ನ್ಯಾಯಾಲಯದ ಮೆಟ್ಟಿಲೇರಿ ದಾವೆ ಹೂಡಿದ್ದು ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಸಂಪಿಗೆ ಎಂಬಲ್ಲಿ ಕಳೆದ ವರ್ಷ ಆರಂಭಗೊಂಡಿರುವ ಪೆಟ್ರೋಲ್ ಪಂಪ್ ಪ್ರಾರಂಭದಲ್ಲಿ ತಾಂತ್ರಿಕ ತೊಂದರೆಯಿಂದ ದಾಸ್ತಾನಿನ ತೈಲ ಸೋರಿಕೆಯಾಗಿತ್ತು. ಪರಿಣಾಮ ಪೆಟ್ರೋಲಿಯಂನ್ನು ಒಂದು ಪಾಳು ಬಾವಿಯ ಮೂಲಕ ಭೂಮಿಗೆ ಇಂಗಿಸಿದ್ದು ಸ್ಥಳೀಯ ಬಾವಿಗಳಲ್ಲಿನ ನೀರು ಕಲುಷಿತಗೊಂಡಿತ್ತು. ಆ ಬಳಿಕ ಪಂಪ್ ಮಾಲಕರು ಸ್ಥಳೀಯರನ್ನು ಸಮಧಾನ ಪಡಿಸಿ ಕೊಳವೆ ಬಾವಿಯ ಮೂಲಕ ನೀರು ಸರಬರಾಜು ಮಾಡುತ್ತಿದ್ದರು.
ಇತ್ತೀಚೆಗೆ ನೀರು ಸರಬರಾಜನ್ನು ತಡೆಹಿಡಿದಿದ್ದು ಸ್ಥಳೀಯರಿಗೆ ಶುದ್ಧ ನೀರಿನ ಸಮಸ್ಯೆ ಎದುರಾಗಿದೆ. ದೂರುದಾರರು ಪೊಲೀಸ್ ಠಾಣೆಗೂ ದೂರು ನೀಡಿದ್ದು ಪೊಲೀಸರು ಪೆಟ್ರೋಲ್ ಪಂಪ್ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
