ಬಂಟ್ವಾಳ: ಎರಡು ವರ್ಷದ ಹಿಂದೆ ಬಂಟ್ವಾಳಕ್ಕೆ ಸಮೀಪದ ಮಣಿಹಳ್ಳ ಬಳಿ ಕಾರ್ಯಾಚರಣೆಯೊಂದರ ವೇಳೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಗಳು ಮತ್ತು ಸಿಬ್ಬಂದಿಗಳ ಮೇಲೆಯೇ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸೋಮವಾರ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆರೋಪಿತರಾದ ಸದ್ದಾಂ ಹುಸೈನ್ ಹಾಗೂ ಮಹಮ್ಮದ್ ಇರ್ಷಾದ್ ಗೆ ತಲಾ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ತಲಾ 3,000 ಸಾವಿರ ರೂ. ದಂಡವನ್ನು ವಿಧಿಸಿ ನ್ಯಾಯಾಲಯ ತೀರ್ಪಿತ್ತಿದೆ.ಈ ಪ್ರಕರಣದಲ್ಲಿ ಆರೋಪಿ ಮಹಮ್ಮದ್ ಮುಕ್ಸೀನ್ ಎಂಬಾತ ನ್ಯಾಯಾಲಯದ ಜಾಮೀನು ಪಡೆದು ಬಳಿಕ ಹಾಜರಾಗದೆ ತಲೆಮರೆಸಿಕೊಂಡಿದ್ದು,ಅತನ ವಿಚಾರಣೆ ಹಾಗೂ ಶೋಧ ಕಾರ್ಯ ಇನ್ನು ಮುಂದುವರಿದಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಮನ್ಸೂರ್ ಮತ್ತು ಅಮ್ಮಿ ಎಂಬವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಪ್ರಕರಣದ ಹಿನ್ನೆಲೆ: 2018 ರ ಜೂ.1 ರಂದು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ವ್ಯಾಪ್ತಿಯಲ್ಲಿ ರಾತ್ರಿ 11-30 ರ ಹೊತ್ತಿಗೆ ಅನುಮಾನಸ್ಪದವಾಗಿ ತಿರುಗುತ್ತಿದ್ದ ಕಾರನ್ನು ಗುರುವಾಯನಕೆರೆ ಪೊಲೀಸ್ ಚೆಕ್ ಪಾಯಿಂಟ್ ನಲ್ಲಿ ಪೊಲೀಸರು ನಿಲ್ಲಿಸಲು ಸೂಚನೆ ನೀಡಿದರೂ, ಇದನ್ನು ದಿಕ್ಕರಿಸಿ ಬಂಟ್ವಾಳದತ್ತ ಧಾವಿಸಿ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ರಾತ್ರಿ ಗಸ್ತಿನಲ್ಲಿದ್ದ ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಮತ್ತು ಬಂಟ್ವಾಳ ನಗರ ಠಾಣಾ ಪಿ.ಎಸ್.ಐ ರವರ ತಂಡ ಮಣಿಹಳ್ಳದ ಬಳಿ ಶರವೇಗದಲ್ಲಿ ಬರುತ್ತಿದ್ದ ಅನುಮಾನಾಸ್ಪದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ, ಆರೋಪಿಗಳು ನಿಲ್ಲಿಸದೆ ಸಿಬ್ಬಂದಿಯವರ ಮೇಲೆ ಕಾರು ಹಾಯಿಸಲು ಬಂದಿದ್ದರು.
ಅಪಾಯದ ಅರಿವಾದ ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪ್ರಸನ್ನ ರವರು ತಮ್ಮ ಇಲಾಖಾ ಪಿಸ್ತೂಲ್ ನಿಂದ ಕಾರಿನ ಕಡೆ ಫೈರಿಂಗ್ ಮಾಡಿದ್ದು, ಇದೇ ವೇಳೆ ಬಂಟ್ವಾಳ ನಗರ ಠಾಣಾ ಪಿ.ಎಸ್.ಐ ಚಂದ್ರಶೇಖರ್ ರವರು ಕಾರಿನ ಚಕ್ರಕ್ಕೆ ತಮ್ಮ ಬಳಿ ಇದ್ದ ಪಂಪ್ ಆ್ಯಕ್ಷನ್ ಗನ್ ನಿಂದ ಫೈರಿಂಗ್ ಮಾಡಿದ್ದರು.ಆಗ ಆರೋಪಿಗಳ ಪೈಕಿ ಸದ್ದಾಂ ಮತ್ತ ಇರ್ಷಾದ್ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು.ಈ ಸಂದರ್ಭ ಮೂವರು ಆರೋಪಿಗಳಾದ ಮಹಮ್ಮದ್ ಮುಕ್ಸೀನ್, ಸದ್ದಾಂ ಹುಸೈನ್ ಮಹಮ್ಮದ್ ಇರ್ಷಾದ್ ಎಂಬವರನ್ನು ವಶಕ್ಕೆ ಪಡೆಯಲಾಗಿತ್ತು. ಮತ್ತಿಬ್ಬರು ಆರೋಪಿಗಳಾದ ಮನ್ಸೂರ್ ,ಅಮ್ಮಿ ಪರಾರಿಯಾಗಿದ್ದರು.
ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕಾದ ಟಿ.ಡಿ. ನಾಗರಾಜ್ ರವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.ಈ ಪ್ರಕರಣ ವಿಚಾರಣೆ ನಡೆಸಿದ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಮೇಲಿಂಗೇಗೌಡ ಅವರು ಆರೋಪಿಗಳಿಬ್ಬರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರೆ,ಇನ್ನಿಬ್ಬರನ್ನು ಖುಲಾಸೆಗೊಳಿಸಿದ್ದಾರೆ.ಈ ಪ್ರಕರಣದಲ್ಲಿ ಸಿಬ್ಬಂದಿಗಳಾದ ಹೆಚ್.ಸಿ ಗಿರೀಶ್, ಹೆಚ್.ಸಿ ಸುರೇಶ್, ಪಿ.ಸಿ ಮಹಮ್ಮದ್ ನಝೀರ್, ಪಿಸಿ ಆದರ್ಶ್, ಎ.ಪಿಸಿ ಸಂಪತ್, ಹೋಂ ಗಾರ್ಡ್ ಭಾಸ್ಕರ ರವರು ಪ್ರಕರಣ ಪತ್ತೆ ಹಚ್ಚುವ ಕಾರ್ಯದಲ್ಲಿ ಶ್ರಮಿಸಿದ್ದರು.
