ಬಂಟ್ವಾಳ: ತಮ್ಮ ಇಡೀ ಸರ್ವಸ್ವವನ್ನೇ ಸಮಾಜಕ್ಕಾಗಿ ಮುಡಿಪಾಗಿಟ್ಟು,ನಾಲ್ಕುವರೆ ದಶಕಗಳ ಕಾಲ ಭಾರತಮಾತೆಯ ಸೇವೆಗೈದು,ತನ್ನ ಪ್ರಬಲ ಇಚ್ಚಾಶಕ್ತಿಯಿಂದ ತರುಣಗಣವನ್ನು ರೂಪಿಸಿ ಸಮಾಜಕ್ಕೆ ಅರ್ಪಿಸಿರುವ ಬರಿಗಾಲ ಸಂತ ದಿವಂಗತ ವೆಂಕಟರಮಣ ಹೊಳ್ಳ ಅವರ ಆಗಲಿಕೆ ಸಮಾಜಕ್ಕೆ ಅಪಾರ ನಷ್ಟವಾಗಿದ್ದು,ಅವರ ಆದರ್ಶ,ಮೇಲ್ಪಂಕ್ತಿ ನಮಗೆ ಅನುಕರಣೀಯವಾಗಿದೆ ಎಂದು ರಾ.ಸ್ವ.ಸೇ.ಸಂಘದ ಮಂಗಳೂರು ವಿಭಾಗದ ವ್ಯವಸ್ಥಾ ಪ್ರಮುಖ್ ಶ್ರೀನಿವಾಸ ಉಬರಡ್ಕ ಹೇಳಿದ್ದಾರೆ.
ಭಾನುವಾರ ಸಂಜೆ ಬಂಟ್ವಾಳ ತಾಲೂಕಿನ ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ಇತ್ತೀಚೆಗೆ ನಿಧನರಾದ ಆಗ್ರಬೈಲು ನಿವಾಸಿ,ಮಂಗಳೂರು ವಿಭಾಗ ಗ್ರಾಮವಿಕಾಸ ಸಂಯೋಜಕ ದಿವಂಗತ ವೆಂಕಟರಮಣ ಹೊಳ್ಳರಿಗೆ ನಡೆದ ಶೃದ್ದಾಂಜಲಿ ಸಭೆಯಲ್ಲಿ ಅವರು ನುಡಿನಮನ ಅರ್ಪಿಸಿ ಮಾತನಾಡಿದರು. ಗ್ರಾಮ ವಿಕಾಸ ಚಿಂತನೆಯನ್ನು ಸರಳೀಕರಣಗೊಳಿಸಿ ಅಪಾರ ಜನಸಮೂಹವನ್ನು ಜೋಡಿಸಿಕೊಂಡು ಸದೃಢ ಸಮಾಜದ ನಿರ್ಮಾಣಕ್ಕಾಗಿ ಅಡಿಪಾಯ ಹಾಕಿಕೊಟ್ಟ ದಿ.ಹೊಳ್ಳರು ದೃಢತೆ,ಕಾರ್ಯತತ್ಪರತೆ,ಮಾತೃಹೃದಯ ಹೊಂದಿದ್ದರು ಎಂದು ಅವರು ನುಡಿದರು.ಪುತ್ತೂರು ಜಿಲ್ಲಾ ಗ್ರಾಮ ವಿಕಾಸ ಸಂಯೋಜಕ ಜಿ.ಕೆ.ಭಟ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಒಳಚರಂಡಿ ಮಂಡಳಿಯ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ದಿ.ಹೊಳ್ಳರ ಸುದೀರ್ಘ ಕಾಲದ ಒಡನಾಡಿಯಾಗಿದ್ದ ಹೊಸದಿಗಂತ ಪ್ರತಿನಿಧಿ ಶ್ರೀಧರ ಭಂಡಾರಿ ನಾರ್ಯಗುತ್ತು,ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ನಿರ್ದೇಶಕ ಪ್ರಭಾಕರ ಪಿ.ಎಂ.,ಅಶೋಕ ಪಕ್ಕಳ ಸನ್ನಿಧಿಗುತ್ತು ಹೊಳ್ಳರ ಜೀವನದ ಕುರಿತಾಗಿ ಗುಣಗಾನಗೈದರು.ಜಿಪಂ ಸದಸ್ಯ ತುಂಗಪ್ಪ ಬಂಗೇರ,ರಾ.ಸ್ವ.ಸೇ.ಸಂಘದ ಹಿರಿಯ ಕಾರ್ಯಕರ್ತ ಪ್ರಕಾಶ್ ರಾವ್ ನೈನಾಡ್,ದೇವಪ್ಪಶೆಟ್ಟಿ ಕುಂಟೆಜಾಲು,ಶ್ಯಮಾ ಪ್ರಸಾದ್ ಪೂಂಜಾ,ಮೋಹನ ನೈನಾಡು,ವಿಜಯ ರೈ ಆಲದಪದವು,ಸುದೀರ್ ಶೆಟ್ಟಿ ಕುಂಡೋಳಿ,ವಾಮದಪದವು ಸಿ.ಎ.ಬ್ಯಾಂಕ್ ಅಧ್ಯಕ್ಷ ಕಮಲ್ ಶೆಟ್ಟಿ,ಆನಂದ ಶೆಟ್ಟಿ ಬೆಟ್ಟು,ನಾಗರಾಜ ಶೆಟ್ಟಿ,ಚಂದ್ರಶೇಖರ ಶೆಟ್ಟಿ ವಾಮದಪದವು,ಪಿಲಾತಬೆಟ್ಟು ಗ್ರಾಪಂನ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರುರಾ.ಸ್ವ.ಸೇ.ಸಂಘದ ಬಂಟ್ವಾಳ ತಾಲೂಕು ಬೌದ್ದಿಕ್ ಪ್ರಮುಖ್ ಚಂದ್ರಶೇಖರ್ ಕಯ್ಯುಬೆ ಕಾರ್ಯಕ್ರಮ ನಿರೂಪಿಸಿದರು.ನವೀನ್ ಶೆಟ್ಟಿ ಕಕ್ಕೆಪದವು ವಯಕ್ತಿಕ ಗೀತೆ ಹಾಡಿದರು.

