ಮೂಡುಬಿದಿರೆ: ಮಿಜಾರುಗುತ್ತುವಿನ ದೈವರಾಧನೆಗೆ ಸಂಬಂಧಪಟ್ಟ ಪೂಕರೆ ಕಂಬಳ ಶುಕ್ರವಾರ ನಡೆಯಿತು. ಮೂರು ಜೋಡಿ ಕಂಬಳದ ಕೋಣಗಳನ್ನು ಗದ್ದೆಗಿಳಿಸಲಾಯಿತು. ಕಂಬಳ ಓಟಗಾರರಾದ ಶ್ರೀನಿವಾಸ ಗೌಡ ಅಶ್ವತ್ಥಪುರ, ರಾಜೇಶ್ ಮಾರ್ನಾಡ್ ಹಾಗೂ ಸನತ್ ಪೆರಿಂಜೆ ಗದ್ದೆಯಲ್ಲಿ ಕೋಣಗಳನ್ನು ಓಡಿಸಿದರು. ಬಳಿಕ ಪೂಕರೆಯನ್ನು (ಹೂವಿನ ತೇರು) ಗದ್ದೆಯಲ್ಲಿ ನಡೆಲಾಯಿತು.
ಸಾಯಂಕಾಲ ಮಿಜಾರುಗುತ್ತಿನಿಂದ ಭಂಡಾರ ತರಲಾಯಿತು. ಪೂಮಾವರ ಸುಬ್ರಹ್ಮಣ್ಯ ಪೆಜತ್ತಾಯ ಅವರ ನೇತೃತ್ವದಲ್ಲಿ ರಾತ್ರಿ ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ನೇಮ ನಡೆಯಿತು. ಶನಿವಾರ ಸುಮಾರು ಮೂವತ್ತು ಮಂದಿ ಸೇರಿ ಗದ್ದೆಯಲ್ಲಿ ನೇಜಿ ನೆಟ್ಟರು.
ಮಿಜಾರುಗುತ್ತು ವರದರಾಜ ಹೆಗ್ಡೆ, ತೆಂಕಮಿಜಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರವೀಣ್ ರೈ ಮಿಜಾರುಗುತ್ತು, ಜಯರಾಮ ಭಟ್, ಕೋಣಗಳ ಯಾಜಮಾನರಾದ ಶಕ್ತಿಪ್ರಸಾದ್ ಶೆಟ್ಟಿ, ರಂಜಿತ್ ಪೂಜಾರಿ ತೋಡಾರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
