ಬಂಟ್ವಾಳ: ಗ್ರಾಮ ಪಂಚಾಯತ್ ಚುನಾವಣೆ ಸಮೀಪಿಸುತ್ತಿದ್ದಂತೆ ಬಂಟ್ವಾಳದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ವಾರದ ಹಿಂದೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗೋಳ್ತಮಜಲು ಗ್ರಾಪಂನ ಮಾಜಿ ಸದಸ್ಯ ಎಲಿಯಾಸ್ ಡಿಸೋಜ ಮತ್ತವರ ಹಲವಾರು ಬೆಂಬಲಿಗರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. 
ಮಾಜಿ ತಾಪಂ ಸದಸ್ಯ ಬಿಜೆಪಿಗೆ:
ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಬಂಟ್ವಾಳ ತಾ.ಪಂ.ನ ಮಾಜಿ ಸದಸ್ಯ,ಮಂಚಿ ಭಾಗದ ಕಾಂಗ್ರೆಸ್ ಮುಖಂಡ ಡಿ.ಕೆ.ಹಂಝ ಸಹಿತ ಅವರ ಬೆಂಬಲಿಗರು ಹಾಗೂ ಜಗದೀಶ್ ಶೆಟ್ಟಿ ಮಾವಂತೂರು,ಚಂದ್ರಹಾಸ ಪೂಜಾರಿ,ಮುಸ್ತಾಫ ಮುಲ್ಲಾರಪಟ್ಣ ಸೇರಿದಂತೆ ಇವರ ಬೆಂಬಲಿಗರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶನಿವಾರ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಸರಳ ಸಮಾರಂಭದಲ್ಲಿ ಇವರೆಲ್ಲರನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ಪಕ್ಷದ ಶಾಲು ಹಾಕಿ ಧ್ವಜ ನೀಡಿ ಬರಮಾಡಿಕೊಳ್ಳಲಾಯಿತು. 
ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಮುಂದಿನ ಹಂತದಲ್ಲಿ ಕಾಂಗ್ರೇಸ್ ನ ದೊಡ್ಡ ದೊಡ್ಡ ನಾಯಕರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಸುಳಿವನ್ನು ನೀಡಿದರು. ಕೇಂದ್ರದಿಂದ ತೊಡಗಿ ಗ್ರಾಮಪಂಚಾಯತ್ ಹಂತದವರೆಗೂ ಬಿಜೆಪಿ ಪರವಾದ ಒಲವು ವ್ಯಕ್ತವಾಗಿದ್ದು , ರಾಷ್ಟ್ರೀಯ ಚಿಂತನೆಗಳ ಮೂಲಕ ದೇಶಕ್ಕಾಗಿ ಕೆಲಸ ಮಾಡುವ, ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬರುವ ಎಲ್ಲರಿಗೂ ಪಕ್ಷಕ್ಕೆ ಸ್ವಾಗತವಿದೆ. ಬಿಜೆಪಿಯಲ್ಲಿ ವಲಸಿಗ,ಮೂಲ ಎಂಬ ತಾರತಮ್ಯವಿಲ್ಲದೆ. ಎಲ್ಲರನ್ನು ಸಮಾನವಾಗಿ ಕಾಣಲಾಗುವುದು ಎಂದ ಶಾಸಕರು ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದ 39 ಗ್ರಾಮಪಂಚಾಯತ್ ಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು.
