ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಬೋಲ್ಫೋಡಿ ಎಂಬಲ್ಲಿ ರವಿವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಬಾಳ್ತಿಲ ಗ್ರಾಮದ ನಿವಾಸಿ ಯತಿರಾಜ್(30) ಮೃತಪಟ್ಟವರಾಗಿದ್ದಾರೆ. ಇವರು ಹಿಂದು ಸಂಘಟನೆಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.
ಭಾನುವಾರ ರಾತ್ರಿ ಸುಮಾರು 10.45ರ ವೇಳೆಗೆ ಘಟನೆ ನಡೆದಿದೆ.
ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಬೋಲ್ಪೋಡಿ ಎಂಬಲ್ಲಿ ಮಾಣಿ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರು ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು,ಬಳಿಕ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದು ನಿಂತಿದೆ.ಪರಿಣಾಮ ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರ ಯತಿರಾಜ್ ಹಾಗೂ ಓಮ್ನಿ ಕಾರು ಚಾಲಕ ಯೋಗೀಶ್ ಗಾಯಗೊಂಡರೆ, ಈ ವೇಳೆ ವಾಹನಗಳು ಹಾಗೂ ರಸ್ತೆ ಬದಿಯ ವಿದ್ಯುತ್ ಕಂಬ ಜಖಂಗೊಂಡಿದ್ದವು.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ತಡರಾತ್ರಿ ವೇಳೆ ಯತಿರಾಜ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳು ಓಮ್ನಿ ಕಾರು ಚಾಲಕ ಯೋಗೀಶ್ ಒಳರೋಗಿಯಾಗಿ ದಾಖಲುಗೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

