ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ ವತಿಯಿಂದ ನಡೆದ ‘ದೀಪಾವಳಿ ಸಂಭ್ರಮ’ ಕಾರ್ಯಕ್ರಮವನ್ನು ಸಜೀಪ ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿ, ದೀಪಾವಳಿ ಸಂದೇಶ ನೀಡಿದರು. ಸಂಭ್ರಮದಲ್ಲಿ ಲಕ್ಷ್ಮೀಪೂಜೆ, ತುಳಸಿಪೂಜೆ, ಗೋಪೂಜೆ, ಬಲೀಂದ್ರಪೂಜೆಯು ರಾಮಕೃಷ್ಣ ರಾವ್ ಇವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ. ಸುಬ್ರಹ್ಮಣ್ಯ ಭಟ್ ಹಾಗೂ ಯೆನೆಪೋಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಮಾನಂದ ನೂಜಿಪ್ಪಾಡಿ ಇವರುಗಳನ್ನು ಲಯನ್ಸ್ ಉಪ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿಯವರು ಗೌರವಿಸಿದರು. ಇದೇ ವೇಳೆ ಆಯೋಜಿಸಿದ ಶಾಂತಿಗಾಗಿ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷರಾದ ಕೃಷ್ಣಶ್ಯಾಮ್ ಎಂ. ವಹಿಸಿದ್ದರು. ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ, ವಲಯಾಧ್ಯಕ್ಷ ಶ್ರೀನಿವಾಸ ಪೂಜಾರಿ, ಹಿರಿಯ ಸದಸ್ಯ ಎನ್. ಸತೀಶ್ ಕುಡ್ವ, ಲಯನ್ಸ್ ನಿರ್ಮಲ ಹೃದಯ ವಿಶೇಷ ಶಾಲಾ ಸಂಚಾಲಕ ದಾಮೋದರ ಬಿ.ಎಂ., ಜಗದೀಶ್ ಯಡಪಡಿತ್ತಾಯ, ಶಿವಾನಂದ ಬಾಳಿಗಾ, ಪುಷ್ಪರಾಜ ಶೆಟ್ಟಿ, ಕಾರ್ಯದರ್ಶಿ ಕೆ. ವೈಕುಂಠ ಕುಡ್ವ, ಖಜಾಂಚಿ ದಿಶಾ ಆಶೀರ್ವಾದ್, ದೀಪಾವಳಿ ಸಂಯೋಜಕಿಯರಾದ ಚಿತ್ರಾ ಜಗದೀಶ್, ಜಯಂತಿ ಮುಕುಂದ ಪ್ರಭು, ದೇವಿಕಾ ದಾಮೋದರ್ ಮತ್ತಿತರರು ಉಪಸ್ಥಿತರಿದ್ದರು.

