ಬಜ್ಪೆ : ರಾಷ್ಟ್ರೀಯತೆ ಕಾಂಗ್ರೆಸ್ ಸಂಸ್ಕೃತಿ. ಉದ್ಯಮಗಳ ರಾಷ್ಟ್ರೀಕರಣ ಮಾಡಿ, ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದು ನಮ್ಮ ಪಕ್ಷದ ಸಂಸ್ಕೃತಿ. ಇದನ್ನೆಲ್ಲ ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವುದು ಬಿಜೆಪಿ ಸಂಸ್ಕೃತಿ. ವಿಮಾನ ನಿಲ್ದಾಣ ಖಾಸಗೀಕರಣಗೊಳಿಸುವ ಮುನ್ನ ಸ್ಥಳೀಯ ಸಂಸದ ಅಥವಾ ಮುಖ್ಯಮಂತ್ರಿಯವರು ಸ್ಥಳೀಯರ ಭಾವನೆ ಅರ್ಥ ಮಾಡಿಕೊಳ್ಳಬೇಕಿತ್ತು. ಯಾವುದೇ ಬೃಹತ್ ಉದ್ಯಮಗಳಿಗೆ ಸ್ಥಳೀಯ ಮೇಧಾವಿ, ಮುತ್ಸದ್ಧಿಗಳ ಹೆಸರಿಡುವುದು ಕರಾವಬಳಿ ಸಂಸ್ಕೃತಿ. ಆದ್ದರಿಂದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶ್ರೀನಿವಾಸ ಮಲ್ಯರ ಹೆಸರಿಡಬೇಕಿತ್ತು. ಬದಲಾಗಿ, ಇಲ್ಲಿ ಎಲ್ಲವೂ ಅದಾನಿಮಯವಾಗಿದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಟೀಕಿಸಿದರು.
ಬಜ್ಪೆ ಕೆಂಜಾರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶದ್ವಾರದ ಎದುರು ಬಜ್ಪೆ ವಿಮಾನ ನಿಲ್ದಾಣ ಖಾಸಗೀಕರಣಗೊಳಿಸಿ ಕೇಂದ್ರದ ನೀತಿ ವಿರುದ್ಧ ಕಾಂಗ್ರೆಸ್ಸಿಗರು ಹಮ್ಮಿಕೊಂಡಿರುವ ಎರಡನೇ ಸುತ್ತಿನ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ವಿಮಾನ ನಿಲ್ದಾಣ, ರೈಲ್ವೇ, ಬಂದರುಗಳಲ್ಲದೆ ಸ್ಥಳೀಯವಾಗಿ ಎನ್ಐಟಿಕೆಯಂತಹ ದೊಡ್ಡ ಕೊಡುಗೆ ನೀಡಿದೆ. ಇದರಿಂದ ಕೋಟ್ಯಂತರ ಉದ್ಯೋಗ ಸೃಷ್ಟಿಯಾಗಿದೆ. ಈ ವಿಮಾನ ನಿಲ್ದಾಣಕ್ಕೆ ಮುಂಬೈ ಕರಾವಳಿಗರ ಕೊಡುಗೆ ಸಾಕಷ್ಟಿದ್ದು, ಈಗ ಅವರೆಲ್ಲರನ್ನು ಕಡೆಗಣಿಸಲಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ವಿನಯಕುಮಾರ ಸೊರಕೆ, ಮಿಥುನ್ ರೈ, ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್, ವಸಂತ್ ಬೆರ್ನಾಡ್, ಧನಂಜಯ ಮಟ್ಟು, ರಾಜಶೇಖರ ಕೋಟ್ಯಾನ್, ಸಚಿನ್ ಅಡಪ, ವಿಜಯಾ ಜಿ ಸುವರ್ಣ, ವೆಲೆರಿಯನ್ ಡಿ’ಸೋಜ, ಚಂದ್ರಹಾಸ್ ಮತ್ತಿತರರು ಉಪಸ್ಥಿತರಿದ್ದರು.
