ಬಂಟ್ವಾಳ: ನಿರೀಕ್ಷೆಯಂತೆ ಕೊನೆಗಳಿಗೆಯಲ್ಲಿ ಕಾಂಗ್ರೆಸ್ – ಎಸ್ ಡಿಪಿಐ ಹೊಂದಾಣಿಕೆ ಮಾಡಿಕೊಂಡ ಹಿನ್ನಲೆಯಲ್ಲಿ ಬಂಟ್ವಾಳ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದ್ದು, ಅಧ್ಯಕ್ಷರಾಗಿ ಹಿರಿಯ ಸದಸ್ಯ ಮಹಮ್ಮದ್ ಶರೀಫ್ ಪರ್ಲಿಯಾ ಉಪಾಧ್ಯಕ್ಷೆಯಾಗಿ ಜೆಸಿಂತಾ ಡಿಸೋಜ ಅವರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕು,ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಬಿ)ಗೆ ಮೀಸಲಿಡಲಾಗಿತ್ತು.ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಹಿರಿಯ ಸದಸ್ಯ ಎ.ಗೋವಿಂದಪ್ರಭು,ಕಾಂಗ್ರೆಸ್ ನಿಂದ ಮಹಮ್ಮದ್ ಶರೀಫ್ ಮತ್ತು ಎಸ್ ಡಿಪಿಐ ಯಿಂದ ಮೋನಿಶ್ ಆಲಿ ನಾಮಪತ್ರ ಸಲ್ಲಿಸಿದ್ದರೆ,ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮೀನಾಕ್ಷಿ ಗೌಡ ಮತ್ತು ಕಾಂಗ್ರೆಸ್ ನಿಂದ ಜೆಸಿಂತಾ ಡಿಸೋಜ ನಾಮಪತ್ರ ಸಲ್ಲಿಸಿದ್ದರು.ಚುನಾವಣಾ ಆಯ್ಕೆ ಪ್ರಕ್ರಿಯೆಗೆ ಮುನ್ನ ಎಸ್ ಡಿಪಿಐ ಅಭ್ಯರ್ಥಿ ಮೊನೀಶ್ ಆಲಿ ತಮ್ಮ ನಾಮಪತ್ರ ವಾಪಾಸ್ ಪಡೆದರು. ಎಸ್.ಡಿ.ಪಿ.ಐ ಬೆಂಬಲದೊಂದಿಗೆ ಕಾಂಗ್ರೆಸ್ತಲಾ 16 ಮತಗಳನ್ನು ಪಡೆದು ಕಾಂಗ್ರೆಸ್ ನ ಮಹಮ್ಮದ್ ಶರೀಫ್ ಪರ್ಲಿಯಾ ಅಧ್ಯಕ್ಷರಾಗಿ ಮತ್ತು ಜಸಿಂತಾ ಡಿಸೋಜಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಮತದೊಂದಿಗೆ ಗೋವಿಂದ ಪ್ರಭು ಮತ್ತು ಮೀನಾಕ್ಷಿಗೌಡ ಅವರು ಕ್ರಮವಾಗಿ13 ಮತ ಪಡೆದರು.ಒಟ್ಟು 27 ಸದಸ್ಯ ಬಲದ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ 12 ,ಬಿಜೆಪಿ 11, ಎಸ್.ಡಿ.ಪಿ.ಐ 4 ಸ್ಥಾನಗಳನ್ನು ಹೊಂದಿದೆ. ಅಲ್ಪಸಂಖ್ಯಾತರಿಗೆ ಮಣೆ: ಇದೇ ಮಾದಲ ಬಾರಿಗೆ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಎರಡು ಸ್ಥಾನಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಒಲಿದಿದೆ.
ಅಧ್ಯಕ್ಷ ಹುದ್ದೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಪಕ್ಷ ಮಣೆ ಹಾಕಿದರೆ ,ಉಪಾಧ್ಯಕ್ಷ ಸ್ಥಾನ ಮೀಸಲಾತಿಯನ್ವಯ ಅಲ್ಪಸಂಖ್ಯಾತ ಕ್ರಿಶ್ಚಯನ್ ಸಮುದಾಯಕ್ಕೆ ದೊರೆತಿದೆ. ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ನಿಂದ ವಾಸುಪೂಜಾರಿ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಶರೀಫ್ ಗೆ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸುವಂತೆ ಸೂಚಿಸಿದ್ದು, ಕಾಂಗ್ರೆಸ್ ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಒಂದು ಹಂತದಲ್ಲಿ ಅಸಮಾಧಾನಗೊಂಡ ವಾಸುಪೂಜಾರಿ ಪಕ್ಷದ ಕಚೇರಿಯಿಂದ ಹೊರೆನಡಿದ್ದು,ಆಗ ಮುಖಂಡರು ಅವರನ್ನು ಸಮಾಧಾನಪಡಿಸಿ ಎತ್ತಿಕೊಂಡು ಕಚೇರಿಯ ಒಳಗೆ ಕರೆದುಕೊಂಡು ಹೋದ ಪ್ರಸಂಗವು ನಡೆಯಿತು.
ಪುರಸಭಾ ಕಚೇರಿ ಹೊರಭಾಗದಲ್ಲು ಈ ವಿಚಾರವಾಗಿ ಗುಸುಗುಸು ಕೇಳಿಬಂತು. ಶರೀಫ್ ಪಕ್ಷದ ಸರ್ವಸಮ್ಮತ ಅಭ್ಯರ್ಥಿಯಾಗಿದ್ದು,ಯಾರಿಗೂ ಅಸಮಾಧಾನವಿಲ್ಲ ಎಂದು ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್ ಮಾಧ್ಯಮಗಳ ಪ್ರಶ್ನೆಗೆ ಸ್ಪಷ್ಟಪಡಿಸಿದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಮತ್ತು ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಮಾತ್ರ ಬೆಂಬಲಿಸಿದ್ದೇವೆ ಎಂದು ಎಸ್ ಡಿಪಿಐ ಸದಸ್ಯ ಮೊನೀಶ್ ಆಲಿ ತಿಳಿಸಿದ್ದಾರೆ.
ಮೂರನೇ ಬಾರಿಗೆ ಸದಸ್ಯ: ಬಿ.ಮೂಡಗ್ರಾಮದ ಪರ್ಲಿಯಾ ವಾಡ್೯ ನಿಂದ ಮೂರನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಶರೀಫ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,ಮಾಜಿ ಸಚಿವರು ಅನುಷ್ಠಾನಕ್ಕೆ ತಂದಿರುವ 24*7 ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ತಂದು ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದು, ಕಸವಿಲೇವಾರಿ,ಡಬಲ್ ಟ್ಯಾಕ್ಸ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.ಉಪಾಧ್ಯಕ್ಷೆ ಜೆಸಿಂತಾ ಮೆಲ್ಕಾರ್ ನಿಂದ ಪುರಸಭೆಗೆ ಎರಡನೇ ಬಾರಿಗೆ ಆಯ್ಕೆಯಾದವರು.
ನೂತನ ಅಧ್ಯಕ್ಷ ,ಉಪಾಧ್ಯಕ್ಷರನ್ನು ಮಾಜಿ ಸಚಿವ ರಮಾನಾಥ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೆರಬಿಕುಂದರ್,ಸುದೀಪ್ ಶೆಟ್ಟಿ,ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ ಜೈನ್,ಎಂ.ಎಸ್.ಮಹಮ್ಮದ್,ಮಮತಾಗಟ್ಟಿ,
ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್.ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು.ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಸಹಕರಿಸಿದರು. ಬಂಟ್ವಾಳ ನಗರ,ಗ್ರಾಮಾಂತರ ಠಾಣೆಯ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.


