ಬಂಟ್ವಾಳ:ಮೆಲ್ಕಾರ್ ಸಮೀಪದ ಗುಡ್ಡೆಯಂಗಡಿ ಬಳಿ ಅಕ್ಟೋಬರ್ 23 ರಂದು ಸಂಜೆ ರೌಡಿಶೀಟರ್ ಚೆನ್ನ ಫಾರೂಕ್ ಯಾನೆ ಫಾರುಇಕ್ ನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ.
ಕಲ್ಲಡ್ಕ ನಿವಾಸಿ ಖಲೀಲ್ ಯಾನೆ ಇಬ್ರಾಹಿಂ ಖಲೀಲ್ (26) ಮೂಲತ: ನಂದಾವರ ನಿವಾಸಿ ಪ್ರಸ್ತುತ ತೊಕ್ಕೊಟ್ಟಿನಲ್ಲಿ ವಾಸ್ತವ್ಯವಿರುವ ಅಪ್ಪಿ ಯಾನೆ ಹಫೀಜ್( 33) ಹಾಗೂ ಬಂಟ್ವಾಳ ತಾ.ನ ನರಿಕೊಂಬು ನಿವಾಸಿ ಇರ್ಷಾದ್ (28) ಬಂಧಿತ ಆರೋಪಿಗಳು. ಕೃತ್ಯದ ಪ್ರಮುಖ ಆರೋಪಿ ಖಲೀಲ್ ಪೊಲೀಸರ ಗುಂಡೇಟಿನಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಶುಕ್ರವಾರ ಈತ ಆಸಗಪತ್ರೆಯಿಂದ ಡಿಸ್ಚಾಜ್೯ ಆಗುತ್ತಿದ್ದಂತೆ ಬಂಧಿಸಲಾಗಿದ್ದರೆ, ಉಳಿದಿಬ್ಬರನ್ನು ಗುರುವಾರ ಸಂಜೆ ತೊಕ್ಕೊಟ್ಟಿನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅ.23 ರಂದು ಮೇಲ್ಕಾರ್ ಸಮೀಪ ಗುಡ್ಡೆಯಂಗಡಿ ಎಂಬಲ್ಲಿ ಕಲ್ಲಡ್ಕ ನಿವಾಸಿ ಫಾರೂಕ್ ಯಾನೆ ಚೆನ್ನಾ ಫಾರೂಕ್ ಎಂಬಾತ ಬೈಕಿನಲ್ಲಿ ಸಾಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ಖಲೀಲ್ ಮತ್ತು ತಂಡ ಡಿಕ್ಕಿ ಹೊಡೆಸಿ ಬಳಿಕ ಆತನನ್ನು ಅಟ್ಟಾಡಿಸಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಕೃತ್ಯದ ಬಳಿಕ ಆರೋಪಿಗಳು ಬೆಂಗಳೂರಿಗೆ ಪರಾರಿಯಾಗಲು ಯತ್ನಿಸಿದಾಗ ಬಂಟ್ವಾಳ ಪೊಲೀಸರು ಬೆನ್ನಟ್ಟಿ ಗುಂಡ್ಯದಲ್ಲಿ ಅಡ್ಡ ಹಾಕಿದಾಗ ಆರೋಪಿಗಳು ಪೊಲೀಸರ ಮೇಲೆಯೇ ತಲವಾರು ದಾಳಿ ನಡೆಸಿದ್ದರೆಂದು ಆರೋಪಿಸಲಾಗಿತ್ತು.
ಈ ಸಂದರ್ಭ ಬಂಟ್ವಾಳ ನಗರ ಠಾಣೆಯ ಎಸ್ ಐ ಅವಿನಾಶ್ ಗುಂಡು ಹಾರಿಸಿದ್ದು, ಆರೋಪಿ ಖಲೀಲ್ ನ ಕಾಲಿಗೆ ಗುಂಡು ಹೊಕ್ಕಿತ್ತು .ಆಗ ಇನ್ನಿಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಉಪ್ಪಿನಂಗಡಿ ಪೊಲೀಸರು ಇವರಿಬ್ಬರಿಗಾಗಿ ಶೋಧ ನಡೆಸಿದ್ದರು.ಆದರೆ ಇವರಿಬ್ಬರ ಪತ್ತೆಯಾಗಿರಲಿಲ್ಲ. ಆರೋಪಿಗಳ ತಲವಾರು ದಾಳಿಯಿಂದ ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಲಾಗಿತ್ತು.ಇದೀಗ ಎಸ್.ಪಿ. ಲಕ್ಮೀಪ್ರಸಾದ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೆಲಂಟಿನ್ ಡಿಸೋಜ,ಹಾಗೂ ಇನ್ಸ್ಪೆಕ್ಟರ್ ನಾಗರಾಜ್ ಅವರ ನಿರ್ದೇಶನದಲ್ಲಿ ಎಸ್.ಐ.ಗಳಾದ ಅವಿನಾಶ್,ಕಲೈಮಾರ್ ಹಾಗೂ ಪ್ರಸನ್ನ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
