ಬಂಟ್ವಾಳ: ದುಷ್ಕರ್ಮಿಗಳಿಂದ ಮಾರಣಾಂತಿಕ ವಾಗಿ ಹಲ್ಲೆಗೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫರಂಗಿಪೇಟೆ ಕೊಟ್ಟಿಂಜ ನಿವಾಸಿ ಛಾಯಾ ಗ್ರಾಹಕ, ಬಿಜೆಪಿ ಕಾರ್ಯಕರ್ತ ದಿನೇಶ್ ಶೆಟ್ಟಿ ಕೊಟ್ಟಿಂಜ ಅವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಆಸ್ಪತ್ರೆಗೆ ಬೇಟಿ ನೀಡಿ ಆರೋಗ್ಯ ವಿಚಾರಿಸಿ ಚಿಕಿತ್ಸೆ ನೆರವಿಗಾಗಿ ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂ.ಆರ್ಥಿಕ ನೆರವು ನೀಡಿದ್ದಾರೆ.

ಅ.28 ರಂದು ಬುಧವಾರ ರಾತ್ರಿ 7.30 ಸುಮಾರಿಗೆ ಪುದು ಗ್ರಾಮದ ಕೊಟ್ಟಿಂಜೆ ನಿವಾಸಿ ದಿನೇಶ್ ಶೆಟ್ಟಿ ಅವರ ಫರಂಗಿಪೇಟೆ ಸ್ಟುಡಿಯೋ ಕ್ಕೆ ನಾಲ್ಕು ಮಂದಿ ನುಗ್ಗಿ ತಲೆ ಹಾಗೂ ಹೊಟ್ಟೆಗೆ ಗಂಭೀರವಾಗಿ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದರು.ಘಟನೆಯಿಂದ ಗಂಭೀರ ಗಾಯಗೊಂಡ ದಿನೇಶ್ ಶೆಟ್ಟಿ ಅವರು ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಗುರುವಾರ ಸಂಜೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ , ಪುದು ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಗಣೇಶ್ ರೈ ಮಾಣಿ ಮತ್ತಿತರರು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು.
ಜೊತೆಗೆ ಚಿಕಿತ್ಸೆಯ ನೆರವಿಗಾಗಿ ಶಾಸಕರು ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಅವರ ಮೂಲಕ ರೂ 1. ಲಕ್ಷ ಹಣವನ್ನು ನೀಡಿದರಲ್ಲದೆ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಶಾಂತ್ ಮಾರ್ಲ ಅವರೊಂದಿಗೆ ದಿನೇಶ್ ಆರೋಗ್ಯದ ಮಾಹಿತಿ ಪಡೆದ ಸೂಕ್ತ ಚಿಕಿತ್ಸೆಯ ಬಗ್ಗೆ ಚರ್ಚಿಸಿದರು.
