ಬಂಟ್ವಾಳ:ಭಂಡಾರಿ ಬೆಟ್ಟುವಿನ ವತ್ಸಿ ಅಪಾರ್ಟ್ ಮೆಂಟ್ ನಲ್ಲಿ ನಡೆದ ನಟ ಸುರೇಂದ್ರ ಭಂಡಾರಿ ಹತ್ಯೆಗೆ ಸಂಬಂದಿಸಿದಂತೆ ಮೂವರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದು,ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 5 ಕ್ಕೇರಿದೆ. ಬಂಟ್ವಾಳ ಕಬ್ಬಿನಹಿತ್ಲು ನಿವಾಸಿ ಪ್ರದೀಶ್ ಯಾನೆ ಪಪ್ಪು(34), ವತ್ಸಿ ಅಪಾಟ್೯ಮೆಂಟ್ ನ ಪಾಲುದಾರ ವೆಂಕಪ್ಪ ಯಾನೆ ವೆಂಕಟೇಶ್ ಹಾಗೂ ನಾವೂರ ನಿವಾಸಿ ಶರೀಫ್ (35) ಎಂಬವರನ್ನು ಬುಧವಾರ ಸಂಜೆ ಬಂಟ್ವಾಳ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ಸಿಬ್ಬಂದಿಗಳ ತಂಡ ವೆಂಕಪ್ಪನನ್ನು ಕಲ್ಲಡ್ಕ ಹಾಗೂ ಪ್ರದೀಶ್ ಮತ್ತು ಶರೀಫ್ ನನ್ನು ಸಿದ್ದಕಟ್ಟೆಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈಗಾಗಲೇ ಆರೋಪಿಗಳಾದ ಬಂಟ್ವಾಳ ತಾ.ನ ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ಸತೀಶ್ ಕುಲಾಲ್ (39 ) ಹಾಗೂ ಮಂಗಳೂರು ನೀರುಮಾರ್ಗ ಬೋಂಡಂತಿಲ ನಿವಾಸಿಗಿರೀಶ್ ( 28) ಎಂಬವರನ್ನು ಬಂಧಿಸಲಾಗಿದ್ದು,ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.ಇದೀಗ ಬಂಧಿತ ಮೂವರು ಆರೋಪಿಗಳನ್ನು ಗುರುವಾರ ಸಂಜೆ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ನಿವೇದನೆಯಂತೆ ಈ ಮೂವರು ಆರೋಪಿಗಳನ್ನು ಕೂಡ ನ್ಯಾಯಾಲಯ ಐದುದಿನಗಳ ಕಾಲ ಪೊಲೀಸ್ ಕಸ್ಟಡಿಗೊಪ್ಪಿಸಿದೆ. ಕಸ್ಟಡಿಯಲ್ಲಿದ್ದ ಪ್ರಕರಣದ ಪ್ರಮುಖ ಆರೋಪಿ ನೀಡಿದ ಸುಳಿವಿನನ್ವಯ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಪ್ರದೀಶ್, ವೆಂಕಪ್ಪ,ಶರೀಫ್ ನನ್ನು ಬಂಟ್ವಾಳ ಡಿವೈಎಸ್ಪಿ ವೆಲೆಂಟಿನ್ ಡಿಸೋಜ ಅವರ ನಿರ್ದೇಶನ ಇನ್ಸ್ ಪೆಕ್ಟರ್ ನಾಗರಾಜ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ತಂಡ ಬಂಧಿಸಿದೆ.
