ಬಂಟ್ವಾಳ:ವಿದೇಶಿ ಚಿಂತನೆ, ವಿದೇಶಿ ಜೀವನ ಪದ್ಧತಿಯ ಅನುಕರಣೆಯಿಂದ ಭಯದ ವಾತಾವರಣ ಸೃಷ್ಠಿಯಾಗಿತ್ತು. ಇದೀಗ ನಾವು ಭಾರತದ ಮೂಲ ಮಣ್ಣಿನ ಸಂಸ್ಕ್ರತಿಯ ಕಡೆಗೆ ಮುಖ ಮಾಡಬೇಕೆಂಬ ಪಾಠವನ್ನು ಕೊರೊನಾ ತಿಳಿಸಿಕೊಟ್ಟಿದೆ. ಇದು ಯುಗದ ಪರಿವರ್ತನೆ. ನಮ್ಮ ನೆಲದಲ್ಲಿ ಏನಿತ್ತು, ಈಗ ಏನಿಲ್ಲ, ಮುಂದೆ ಹೇಗೆ ಬದುಕಿದರೆ ನಮ್ಮ ಭೂಮಿಗೆ ಭವಿಷ್ಯವಿದೆ ಎಂಬ ಅರಿವು ತಿರುಗುಬಾಣದಲ್ಲಿ ಮೂಡುತ್ತಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಹೇಳಿದ್ದಾರೆ. 
ಮೊಡಂಕಾಪು ಸರಿದಂತರ ಪ್ರಕಾಶನ ಪ್ರಕಟಿಸಿರುವ ಪ್ರೊ.ರಾಜಮಣಿ ರಾಮಕುಂಜ ಅವರ “ತಿರುಗುಬಾಣ” ಕೃತಿಯನ್ನು ಭಾನುವಾರ ಸಂಜೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಾಲಯದ ವಠಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಹಣ ಇದ್ದರೆ ಸಾಕು, ಹಣದಿಂದಲೇ ಎಲ್ಲವನ್ನು ಸಾಧಿಸಬಹುದೆಂಬ ಭ್ರಮೆ ದೂರವಾಗಿ ನಾವು ಇನ್ನೊಬ್ಬರಿಗಾಗಿ ಬದುಕಬೇಕು, ಸಂಸ್ಕ್ರತಿ ಮತ್ತು ಪ್ರಕೃತಿಯನ್ನು ಉಳಿಸಬೇಕು. ತಪ್ಪಿದರೆ ಪ್ರಕೃತಿ ಮುನಿಯುತ್ತದೆ ಎಂಬುದರ ಸಂಕೇತವಾಗಿ ತಿರುಗುಬಾಣ ನಮ್ಮಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಡಾ. ಭಟ್ ಹೇಳಿದರು.ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಿರೀಶ್ ಭಟ್ ಅಜೆಕ್ಕಳ ಅಧ್ಯಕ್ಷತೆ ವಹಿಸಿ,ಪರಿಸರದ ಮೇಲೆ ಮಾನವರಾದ ನಾವು ಪ್ರಯೋಗಿಸಿದ ಬಾಣವೇ ಈಗ ತಿರುಗು ಬಾಣವಾಗಿದೆ. ಆಧುನಿಕ ನಾಗರಿಕತೆ, ವೈಜ್ಞಾನಿಕ ಸಂಶೋಧನೆಯ ನೆಪದಲ್ಲಿ ಪ್ರಕೃತಿಯ ಮೇಲೆ ಮಾನವ ಹಿಡಿತ ಸಾಧಿಸಿ ಅದರಿಂದಲೇ ಮಾನವ ಜೀವನ ಉತ್ತಮ ಪಡಿಸಬಹುದೆಂಬ ಕಲ್ಪನೆಯೇ ಅರ್ಥಹೀನವಾದುದು. ಇದೇ ಎಲ್ಲಾ ಬಗೆಯ ಅನಾಹುತಗಳಿಗೆ ಕಾರಣ ಎಂದರು. ಭಾರತೀಯ ತತ್ವಜ್ಞಾನದ ಹಿಂದೆ ಹೋದರೆ ಪ್ರಕೃತಿಯ ಮೇಲೆ ಆಕ್ರಮಣ ಕಡಿಮೆಯಾಗಬಹುದು.
ಈ ಹಿನ್ನೆಲೆಯಲ್ಲಿಪ್ರಕೃತಿಯ ಜತೆ ಬದುಕು ಕಟ್ಟಬೇಕಾದ ಚಿಂತನೆ ಬೆಳೆಸುವ ಮತ್ತು ಪರಿಸರದಲ್ಲಿ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಎಂಬ ಪ್ರಜ್ಞೆಯನ್ನು ಮೂಡಿಸುವ ಬರಹಗಳು ತಿರುಗುಬಾಣದಲ್ಲಿ ಗಮನ ಸೆಳೆಯುತ್ತದೆ ಎಂದು ಡಾ. ಗಿರೀಶ್ ಭಟ್ ಹೇಳಿದರು.ಮಂಗ್ಲಿಮಾರ್ ಅಣ್ಣಪ್ಪ ಸ್ವಾಮಿ ಜುಮಾದಿ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆ ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಮೋಹನ್ ರಾವ್, ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗದ ಅಧ್ಯಕ್ಷ ಸುದರ್ಶನ್ ಜೈನ್ ಉಪಸ್ಥಿತರಿದ್ದರು.ನ್ಯಾಯವಾದಿ ರವೀಂದ್ರ ಕುಕ್ಕಾಜೆ ಸ್ವಾಗತಿಸಿದರು. ಪತ್ರಕರ್ತ ಗೋಪಾಲ ಅಂಚನ್ ವಂದಿಸಿದರು. ಸೂರ್ಯನಾರಾಯಣ ರಾವ್ ಕಾರ್ಯಕ್ರಮ ನಿರೂಪಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಮತ್ತು ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗ ಬಂಟ್ವಾಳದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
