ಬಂಟ್ವಾಳ:ಬಿ.ಸಿ.ರೋಡಿನಲ್ಲಿರುವ ಮಿನಿ ವಿಧಾನಸೌಧದಲ್ಲಿನ ದೋಷ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯಿತ್ ಸದಸ್ಯ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಹೋಮ ಸೋಮವಾರ ನಡೆಯಿತು.ಮಿನಿವಿಧಾನಸೌಧದಲ್ಲಿ ಕಾರ್ಯಾಚರಿಸುತ್ತಿರುವ ಕಂದಾಯ ಇಲಾಖೆಯ ಇಬ್ಬರು ಉಪತಹಶೀಲ್ದಾರರು ಬೆರಳೆಣಿಕೆಯ ದಿನಗಳ ಮಧ್ಯದಲ್ಲಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪ್ರಶ್ನಾಚಿಂತನೆ ನಡೆಸಲಾಗಿದ್ದು,ಅದರಲ್ಲಿ ಕಂಡುಬಂದಂತೆ ಈ ಹೋಮವನ್ನು ಮಾಡಲಾಗಿದೆ. ಮಿನಿವಿಧಾನಸೌಧಕ್ಕೆ ವಾಸ್ತುದೋಷ ಮತ್ತು ಈ ಪ್ರದೇಶದಲ್ಲಿ ನಾಗನಡೆ ಇರುವ ವಿಚಾರ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿತ್ತು.
ಕಳೆದ ಸೆಪ್ಟಂಬರ್ ತಿಂಗಳಲ್ಲಿ ಉಪತಹಶೀಲ್ದಾರ್ ಗಳಿಬ್ಬರು ನಿಧನಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರಿಂಜ ಕಳ್ಳಿಮಾರು ಜೋತಿಷ್ಯಿ ವೆಂಕಟರಮಣ ಮುಚ್ಚಿನ್ನಾಯರಲ್ಲಿ ಪ್ರಶ್ನಾ ಚಿಂತನೆ ನಡೆಸಿದ್ದು, ಅದರಲ್ಲಿ ಕಂಡುಬಂದಂತೆ ಇದೀಗ ಬಂಟ್ವಾಳ ಮಿನಿವಿಧಾನಸೌಧಕ್ಕಿರು ದೋಷ ನಿವಾರಣೆ ಮತ್ತು ಫಲ ಪ್ರಾಪ್ತಿಗಾಗಿ ಮೃತ್ಯುಂಜಯ ಹೋಮಗಳನ್ನು ನಡೆಸಲಾಗಿದೆ ಎಂದು ಈ ಸಂದರ್ಭ ತುಂಗಪ್ಪ ಬಂಗೇರ ಮಾಧ್ಯಮಗಳಿಗೆ ಹೇಳಿದರು.
ಉಡುಪಿ ಚಂದ್ರ ಮೌಳೀಶ್ವರ ದೇವಸ್ಥಾನದ ಅರ್ಚಕರಾದ ಮನೋಹರ ತಂತ್ರಿಯವರ ನೇತೃತ್ವದಲ್ಲಿ ಮತ್ತು ಬಿ.ಸಿ.ರೋಡು ರಕ್ತೇಶ್ವರಿ ದೇವಿ ದೇವಸ್ಥಾನದ ಅರ್ಚಕರಾದ ರಘುಪತಿ ಭಟ್ ರ ಪೌರೋಹಿತ್ಯದಲ್ಲಿ ಮೃತ್ಯಂಜಯ ಹೋಮ ಮತ್ತು ವೈದಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ಹೋಮ ಆಯೋಜಿಸಿದ ಜಿಪಂ ಸದಸ್ಯ ತುಂಗಪ್ಪ ಬಂಗೇರ ಜತೆಗೆ ಪೂರ್ಣಾಹುತಿ ವೇಳೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಜಿಪಂ ಸದಸ್ಯರಾದ ರವಿಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ಶಂಕರ್ ಬೆದ್ರಮಾರ್,ಮೋಹನ್ ಆಚಾರ್ಯ , ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರ.ಕಾರ್ಯದರ್ಶಿ ಡೊಂಬಯ್ಯ ಅರಳ, ಸಂತೋಷ್, ಪ್ರಭಾಕರ ಪಿ.ಎಂ.ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.
