ಬಂಟ್ವಾಳ:ಜಾನುವಾರುಗಳನ್ನು ಕಳವುಗೈದು ನಿರ್ಜನ ಪ್ರದೇಶದಲ್ಲಿ ಕೂಡಿಹಾಕಿ ಬಳಿಕ ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟಮಾಡುವ ಬೃಹತ್ ಜಾಲವೊಂದನ್ನು ಪುಂಜಾಲಕಟ್ಟೆ ಪೊಲೀಸರು ಭೇದಿಸಿದ್ದು, 16 ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಶನಿವಾರ ರಾತ್ರಿ ವೇಳೆ ಕಾವಳಮೂಡೂರು ಗ್ರಾಮದ ಎನ್.ಸಿ .ರೋಡ್ನಲ್ಲಿ ಕಾಡು ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಅಮಾನವೀಯವಾಗಿ ಕೂಡಿ ಹಾಕಿ ವಾಹನಗಳಲ್ಲಿ ಸಾಗಾಟಕ್ಕೆ ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಸ್ಥಳೀಯ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ.
ತಕ್ಷಣ ಕಾರ್ಯಪ್ರವೃತರಾದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್.ಐ ಸೌಮ್ಯಾ ಜೆ. ಮತ್ತವರ ಸಿಬ್ಬಂದಿಗಳು ದಾಳಿ ಕಾರ್ಯಾಚರಣೆ ನಡೆಸಿದ್ದು,ಈ ಸಂದರ್ಭ ಸ್ಥಳದಲ್ಲಿದ್ದ ಒರ್ವನನ್ನು ಬಂಧಿಸಿದ್ದು,ಉಳಿದವರು ವಾಹನಗಳನ್ನು ಅಲ್ಲಿಯೇ ತೊರೆದು ಪರಾರಿಯಾಗಿದ್ದಾರೆ.
ಬಂಧಿತನನ್ನು ಎನ್ .ಸಿ.ರೋಡ್ ನಿವಾಸಿ ರಹೀಲ್ ಎಂದು ಹೆಸರಿಸಲಾಗಿದೆ.ಪೊಲೀಸರು ಸ್ಥಳದಲ್ಲಿದ್ದ ಜಾನುವಾರುಗಳ ಸಾಗಾಟಕ್ಕೆ ಬಳಸಿದ ತಲಾ ಒಂದುಮಿನಿ ಟೆಂಪೋ, ಬೊಲೆರೋ ಜೀಪ್ ಹಾಗೂ ಎರಡು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು , 7 ದನ ಮತ್ತು 9 ಕರುಗಳು ರಕ್ಷಿಸಿದ್ದಾರೆ. ಈ ಕುರಿತು ಪುಂಜಾಲಕಟ್ಟೆ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

